ಬೆಂಗಳೂರು: ನಗರದಲ್ಲಿ ಈಗಿನ ನೀರು ನಿರ್ವಹಣೆಯನ್ನು ಮಾದರಿಯನ್ನಾಗಿಟ್ಟುಕೊಂಡು ಮುಂದಿನ ಅವಶ್ಯಕತೆಗೆ ಇನ್ನಷ್ಟು ಸುಸ್ಥಿರ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ಪ್ರಸಾತ್ ಮನೋಹರ್ ಹೇಳಿದರು.
ವಿಶ್ವಸಂಸ್ಥೆಯ ‘ಕ್ಲೈಮ್ಯಾಟ್ ಚೇಂಜ್ ಇನೋವೇಷನ್’ ಕಾರ್ಯಾಗಾರದಲ್ಲಿ
ನೀರು ಸರಬರಾಜು, ನಿರ್ವಹಣೆ, ಎದುರಾದ ಸವಾಲುಗಳು, ಅವುಗಳನ್ನು ಜಲಮಂಡಳಿ ಸಮರ್ಪಕವಾಗಿ ನಿಭಾಯಿಸಿದ ರೀತಿಗಳನ್ನು ಅವರು ಪ್ರಸ್ತುತ ಪಡಿಸಿದರು.
‘ನಗರದಲ್ಲಿ ಶೇ 40ರಷ್ಟು ಜನರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದ ಕಾರಣ ಶೇ 50ರಷ್ಟು ಕೊಳವೆಬಾವಿಗಳು ಬತ್ತಿಹೋದವು. ಇದರಿಂದ ಕಾವೇರಿ ನೀರಿನ ಮೇಲೆ ಒತ್ತಡ ಹೆಚ್ಚಾಯಿತು. ಎದುರಾಗಿದ್ದ ನೀರಿನ ಅಭಾವವನ್ನು ಹೊಸ ತಂತ್ರಜ್ಞಾನಗಳು ಹಾಗೂ ಸುಸ್ಥಿರ ಯೋಜನೆಗಳ ಅಳವಡಿಕೆಯಿಂದಾಗಿ ಬೆಂಗಳೂರು ಜಲಮಂಡಳಿ ಸಮರ್ಥವಾಗಿ ನಿಭಾಯಿಸಲಾಯಿತು’ ಎಂದು ಮಾಹಿತಿ ನೀಡಿದರು.
ನೀರಿನ ಸಮರ್ಪಕ ಬಳಕೆಗೆ ಕಟ್ಟುನಿಟ್ಟಿನ ಕ್ರಮಗಳ ಅಳವಡಿಕೆ, ನೀರಿನ ಉಳಿತಾಯಕ್ಕೆ ಏರಿಯೇಟರ್ಗಳ ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆಗೆ ಪ್ರೋತ್ಸಾಹ, ಕೊಳವೆಬಾವಿಗಳ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ... ಹೀಗೆ ಹಲವು ನೂತನ ಕ್ರಮಗಳ ಬಗ್ಗೆ ಜಲಮಂಡಳಿ ಅಧ್ಯಕ್ಷರು ವಿವರಣೆ ನೀಡಿದರು. ದೇಶದ ವಿವಿಧ ನಗರಗಳಿಂದ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ನಗರ ಯೋಜನೆಯಲ್ಲಿ ತೊಡಗಿಕೊಂಡವರು ತಮ್ಮ ನಗರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀರಿನ ಅಭಾವ ನಿರ್ವಹಣೆಯಲ್ಲಿ ಜಲಮಂಡಳಿ ಅಳವಡಿಸಿಕೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.