ಕೆ.ಆರ್.ಪುರ: ಬಿದರಹಳ್ಳಿ ಹೋಬಳಿಯ ಕೆ.ದೊಮ್ಮಸಂದ್ರದ ಎಂಬತ್ತು ಅಡಿ ಮುಖ್ಯರಸ್ತೆ ವಿಸ್ತರಣೆ ಹಾಗೂ ರಾಜಕಾಲುವೆಗೆ ಬ್ರಿಡ್ಜ್ ನಿರ್ಮಿ ಸಲು ಅಗೆದ ರಸ್ತೆ ಹಾಗೇ ಬಿಡಲಾಗಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸುವ ಸ್ಥಿತಿ ಇದ್ದು, ಅಪಘಾತಗಳಿಗೂ ಆಸ್ಪದವಾಗುತ್ತಿದೆ.
ಮೇಡಹಳ್ಳಿಯಿಂದ ಬೆಳತೂರು ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ನಿತ್ಯ ಸಾವಿರಾರು ವಾಹನ ಗಳು ಸಂಚರಿಸಲಿದ್ದು, ಕೆ.ದೊಮ್ಮಸಂದ್ರ ಬಳಿ ಮೂರು ತಿಂಗಳ ಹಿಂದೆ ಎಂಬತ್ತು ಅಡಿ ರಸ್ತೆಯನ್ನು ಅಗೆದಿದ್ದು, ಹಾಗೆ ಬಿಡಲಾಗಿದೆ.
‘ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ರಸ್ತೆಯನ್ನು ಅಗೆದು ಬಿಟ್ಟಿರುವುದರಿಂದ ರಸ್ತೆ ಪಕ್ಕದಲ್ಲಿ ದೊಡ್ಡ ಕಂದಕ ಮೂಡಿದೆ. ಮಕ್ಕಳು, ಹಿರಿಯರಿಗೆ ತೊಂದರೆ ಆಗುತ್ತಿದೆ. ಸೇತುವೆ ನಿರ್ಮಿಸಲು ಕಟ್ಟಿರುವ ಕಂಬಿ ಗಳು ಹಾಗೆ ಬಿಡಲಾಗಿದೆ. ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬಂತಹ ಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿ ಬೆಳತೂರು ಪರಮೇಶ್ ದೂರಿದರು.
‘ಪಕ್ಕದಲ್ಲಿಯೇ ಕೇಬಲ್ ಅಳವಡಿಕೆ ಕಾಮಗಾರಿಯೂ ನಡೆಯುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಮೂರು ಬಾರಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದರು.