ಬೆಂಗಳೂರು: ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿ ಸಮೀಪದ ಕೆ.ಇ.ಬಿ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.
ಮಾರ್ಚ್ 1ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಮೈಸೂರು ರಸ್ತೆ ಜಂಕ್ಷನ್ನಿಂದ ಸಿಲ್ಕ್ಬೋರ್ಡ್ವರೆಗಿನ ಹೊರ ವರ್ತುಲ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸುವ ಯೋಜನೆಯನ್ನು ನಗರೋತ್ಥಾನ ಅನುದಾನದಡಿ ಕೈಗೊಳ್ಳಲಾಗಿದೆ. ಇದರ ಭಾಗವಾಗಿ 300 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
₹17.82 ಕೋಟಿ ವೆಚ್ಚದ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಎಂ. ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಕಂಪೆನಿಗೆ ನೀಡಲಾಗಿತ್ತು. 2015ರ ಸೆಪ್ಟೆಂಬರ್ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 19 ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಸದ್ಯ ಪಿಲ್ಲರ್ಗಳ ಮೇಲೆ ಬೀಮ್ಗಳನ್ನು (ಗರ್ಡರ್) ಇಡುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆ ವಿಭಜಕ, ತಡೆಗೋಡೆ ನಿರ್ಮಾಣ, ಡಾಂಬರೀಕರಣ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕೆಲಸಗಳು ಬಾಕಿ ಉಳಿದಿವೆ.
ದೂಳಿನ ಮಜ್ಜನ: ಮೇಲ್ಸೇತುವೆ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದೆ. ಇದರ ಅಕ್ಕಪಕ್ಕದ ಮನೆ, ಅಂಗಡಿಗಳು ದೂಳುಮಯವಾಗಿವೆ. ‘ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ವಾಹನ ದಟ್ಟಣೆ ಒಂದು ಕಡೆಯಾದರೆ, ದೂಳಿನ ಸಮಸ್ಯೆ ಮತ್ತೊಂದೆಡೆ. ದೂಳು ನೇರವಾಗಿ ಮೂಗಿಗೆ ಬಡಿಯುತ್ತದೆ. ಅಂಗಡಿಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯ ವ್ಯಾಪಾರಿ ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಚಾರ ದಟ್ಟಣೆ ಕಿರಿಕಿರಿ: ಹೊರವರ್ತುಲ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬನಶಂಕರಿ, ಮೈಸೂರು ರಸ್ತೆ ಜಂಕ್ಷನ್ ಹಾಗೂ ಗಿರಿನಗರ, ಆವಲಹಳ್ಳಿ ಕಡೆಯಿಂದ ವಾಹನಗಳು ಈ ರಸ್ತೆಯ ಮಾರ್ಗವಾಗಿ ಸಂಚರಿಸುತ್ತವೆ. ಆದರೆ, ಸೇತುವೆಯ ಎರಡೂ ಬದಿಗಳಲ್ಲಿ ಕಿರಿದಾದ ರಸ್ತೆ ಇದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಕೆರೆಕೋಡಿ ಮುಖ್ಯರಸ್ತೆಯ ಸಿಗ್ನಲ್ವರೆಗೆ ವಾಹನಗಳು ನಿಂತಿರುತ್ತವೆ.
‘ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ಮಾರ್ಗವಾಗಿ ಬಂದರೆ ಕಿರಿಕಿರಿ ತಪ್ಪಿದ್ದಲ್ಲ. ಸೇತುವೆಯಿಂದ ಮುಂದೆ ತೆರಳಲು 15–20 ನಿಮಿಷಗಳು ಹಿಡಿಯುತ್ತವೆ. ವಾಹನಗಳು ತೆವಳುತ್ತ ಸಾಗುವುದರಿಂದ ಕಚೇರಿಗೆ ಬೇಗ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಕಂಪೆನಿಯೊಂದರ ಉದ್ಯೋಗಿ ಶ್ಯಾಮ್ ಅಳಲು ತೋಡಿಕೊಂಡರು.
ಮರಗಳ ಹನನ: ‘ರಸ್ತೆಯ ಮಧ್ಯದಲ್ಲಿ ಹತ್ತಾರು ಮರಗಳಿದ್ದವು. ಅವುಗಳನ್ನು ಸೇತುವೆಗಾಗಿ ಕಡಿಯಲಾಗಿದೆ’ ಎಂದು ಹೊಸಕೆರೆಹಳ್ಳಿ ನಿವಾಸಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು. ‘ಕೆರೆಕೋಡಿ ಮುಖ್ಯರಸ್ತೆಯ ಸಿಗ್ನಲ್ನಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿದೆ. ಅಲ್ಲಿ ಸೇತುವೆ ನಿರ್ಮಿಸುವ ಅಗತ್ಯವಿದೆ’ ಎಂದು ಹೇಳಿದರು.
ಗಂಟೆಗೆ 10,000 ವಾಹನಗಳು: ಕೆ.ಇ.ಬಿ ಜಂಕ್ಷನ್ನಲ್ಲಿ ಬೆಳಗಿನ ದಟ್ಟಣೆ ಅವಧಿಯಲ್ಲಿ ಗಂಟೆಗೆ ಸರಾಸರಿ 10,000 ವಾಹನಗಳು ಚಲಿಸುತ್ತವೆ. ಸಂಜೆ 6ರಿಂದ 7ರ ಅವಧಿಯಲ್ಲಿ ಸರಾಸರಿ 9,000 ವಾಹನಗಳು ಓಡಾಡುತ್ತವೆ ಎಂದು ಅಧ್ಯಯನ ವರದಿಗಳು ತಿಳಿಸಿವೆ.
ಹೈಟೆನ್ಷನ್ ಕಂಬ ಸ್ಥಳಾಂತರದಿಂದ ಕಾಮಗಾರಿ ವಿಳಂಬ
‘ಬೆಸ್ಕಾಂಗೆ ಸೇರಿದ ಹೈಟೆನ್ಷನ್ ಕಂಬಗಳನ್ನು ಸ್ಥಳಾಂತರಿಸುವ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಮೂಲಸೌಕರ್ಯ) ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಸ್ತೆಯ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಷನ್ ಕಂಬಗಳನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ಬೆಸ್ಕಾಂಗೆ ಪತ್ರ ಬರೆದಿದ್ದೆವು. ಇದಕ್ಕೆ ಉತ್ತರಿಸಿದ್ದ ಬೆಸ್ಕಾಂ ಅಧಿಕಾರಿಗಳು, ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ನೆಲದಡಿ ಕೇಬಲ್ ಅಳವಡಿಸಲಾಗುತ್ತಿದೆ. ಅದೇ ರೀತಿ ನೀವು ಸಹ ನೆಲದಡಿ ಕೇಬಲ್ ಅಳವಡಿಸಬೇಕು ಎಂದು ಸೂಚನೆ ನೀಡಿದ್ದರು’ ಎಂದರು.
‘ನೆಲದಡಿ ಕೇಬಲ್ ಅಳವಡಿಸಲು ಅಧಿಕ ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಕಂಬಗಳನ್ನು ಮಾತ್ರ ಸ್ಥಳಾಂತರ ಮಾಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದೆವು’ ಎಂದು ಹೇಳಿದರು.
ಮೇ 10ಕ್ಕೆ ಗಡುವು
‘ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೇ 10ರೊಳಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅಂದು ಉದ್ಘಾಟನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಹೀಗಾಗಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದು ಶ್ರೀನಿವಾಸಮೂರ್ತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.