ಬೆಂಗಳೂರು: ಹಿರಿಯ ಸಿನಿಮಾ ಛಾಯಾಗ್ರಾಹಕರಾಗಿದ್ದ ಆರ್.ಎನ್.ಕೃಷ್ಣ ಪ್ರಸಾದ್ (82) ಬುಧವಾರ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಚೆನ್ನೈನ ಎವಿಎನ್ ಸಂಸ್ಥೆಯಲ್ಲಿ ಛಾಯಾಗ್ರಾಹಕ ಸ್ವಾಮಿ ಎಂಬುವವರ ಬಳಿ ಸುಮಾರು ಏಳೆಂಟು ಚಲನಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ನಂತರ `ಪ್ರೇಮದ ಪುತ್ರಿ~ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದರು.
ಆರ್.ಎನ್.ಜಯಗೋಪಾಲ್ ಹಾಗೂ ಸುದರ್ಶನ್ ಅವರ ಸೋದರರಾಗಿದ್ದ ಅವರು `ಬೆಳ್ಳಿಮೋಡ~, `ಮರೆಯದ ಹಾಡು~ ಮತ್ತು `ಅವಳ ಅಂತರಂಗ~ ಚಿತ್ರಗಳ ಛಾಯಾಗ್ರಹಣಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅವರು ನಿರ್ದೇಶಿಸಿದ ಒಂದೇ ಒಂದು ಚಿತ್ರ `ನಗುವ ಹೂ~ ನ ನಿರ್ದೇಶನಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ನಾಲ್ಕು ಭಾಷೆಗಳ ಸುಮಾರು 85 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಅವರು ತಮಿಳಿನ `ಚಿತ್ತಿ~ ಹಾಗೂ ತೆಲುಗಿನ `ಪವಿತ್ರ ಬಂಧ ಗಾಯತ್ರಿ~ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದರು. ಅವರು 1983 ರಲ್ಲಿ ಚೆನ್ನೈನಲ್ಲಿ ಕನ್ನಡ ಕೂಟ ಸ್ಥಾಪಿಸಿ ತಮಿಳುನಾಡಿನಲ್ಲಿ ಕನ್ನಡ ಕಂಪು ಪಸರಿಸಲು ಕಾರಣರಾಗಿದ್ದರು.
ಕಳೆದ ಹಲವು ವರ್ಷಗಳಿಂದ ಚೆನ್ನೈನಲ್ಲಿಯೇ ವಾಸವಿದ್ದ ಕೃಷ್ಣ ಪ್ರಸಾದ್ ಜೀವಮಾನದ ಸಾಧನೆಗಾಗಿ `ವಿಷ್ಣುವರ್ಧನ ಪ್ರಶಸ್ತಿ~ಯ ಗೌರವಕ್ಕೆ ಭಾಜನರಾಗಿದ್ದರು. ಮೃತರು ಪತ್ನಿ ಉಷಾ ಪ್ರಸಾದ್, ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ.