ಬೆಂಗಳೂರು: ‘ದೇಶದ ಒಕ್ಕೂಟ ವ್ಯವಸ್ಥೆ ಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಸ್ಥಾನಮಾನ ಸಿಗುತ್ತಿಲ್ಲ. ಭಾಷಾ ವಿಚಾರ ದಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ವಾಗುತ್ತಿದೆ. ಇದು ಹೀಗೆ ಮುಂದುವರೆದರೆ ದೇಶ ಇಬ್ಭಾಗವಾಗುವುದರಲ್ಲಿ ಎರಡು ಮಾತಿಲ್ಲ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಕ್ರಮದ ವಿರುದ್ಧ ಖಂಡಿಸಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ವಯಿಸುವಂತೆ ತ್ರಿಭಾಷಾ ಸೂತ್ರ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ದ್ವಿಭಾಷಾ ಸೂತ್ರ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿ ದಕ್ಷಿಣ ರಾಜ್ಯಗಳ ಯಾವುದಾದರೂ ಒಂದು ಭಾಷೆ ಕಲಿಯಬೇಕು ಎಂದು ಹೇಳಲಾಗಿದೆ. ಆದರೆ, ಇದು ಪಾಲನೆಯಾಗಿಲ್ಲ. ಹಾಗಿದ್ದ ಮೇಲೆ ನಾವ್ಯಾಕೆ ಹಿಂದಿ ಕಲಿಯಬೇಕು’ ಎಂದು ಪ್ರಶ್ನಿಸಿದರು.
‘ಎಲ್ಲ ರಾಜ್ಯಗಳು ಒಗ್ಗೂಡಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಶತಮಾನಗಳಿಂದ ದ್ರಾವಿಡ ಭಾಷೆಗಳ ವಿಚಾರದಲ್ಲಿ ತಾರತಮ್ಯ ನೀತಿ, ದಬ್ಬಾಳಿಕೆ ನಡೆಸಲಾಗುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರಿಕೆ ವಿಚಾರ ಇದೇ ಮೊದಲೇ ನಲ್ಲ. ಹಿಂದೆಯೂ ಸಾಕಷ್ಟು ಬಾರಿ ಈ ಪ್ರಯತ್ನ ನಡೆದಿತ್ತು. ಕೇಂದ್ರ ಸರ್ಕಾರ ಈ ವಿಚಾರದಿಂದ ಹಿಂದೆ ಸರಿಯದಿದ್ದರೆ ಒಕ್ಕೂಟ ವ್ಯವಸ್ಥೆಯಿಂದ ಹೊರಬರುವ ಕಾಲ ದೂರ ಉಳಿದಿಲ್ಲ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ‘ಭಾರತ ಬಹುಭಾಷಾ ಸಂಸ್ಕೃತಿ ಹೊಂದಿದ ದೇಶ. ಈ ಸಾಂಸ್ಕೃತಿಕ ಬಹುತ್ವವೇ ಭಾರತೀಯರ ಹೆಮ್ಮೆ. ಅಲ್ಲದೆ, ಕನ್ನಡ, ಹಿಂದಿ ಸೇರಿ ಒಟ್ಟು 22 ಭಾಷೆಗಳಿಗೆ ಸಂವಿಧಾನ ಮಾನ್ಯತೆ ಸಿಕ್ಕಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹಿಂದಿ ಭಾಷೆಯನ್ನು ಮಾತ್ರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಮುಂದಾ ಗಿರುವುದು ಸರಿಯಲ್ಲ’ ಎಂದರು.
****
ಸೆಪ್ಟೆಂಬರ್ 14ರಂದು ಹಿಂದಿ ಸಪ್ತಾಹ ದಿನಾಚರಣೆ ಇದೆ. ಈ ದಿನವನ್ನು ರಾಜ್ಯದಾದ್ಯಂತ ಕರಾಳ ದಿನಾಚರಣೆಯನ್ನಾಗಿ ಆಚರಿಸುವ ಉದ್ದೇಶವಿದೆ
ಪ್ರೊ.ಚಂದ್ರಶೇಖರ ಪಾಟೀಲ, ಸಾಹಿತಿ