ಬೆಂಗಳೂರು: ಒಂದು ಲಕ್ಷ ರೂಪಾಯಿಗಳಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡುವ, ಅವರ ಕಟ್ಟಡಗಳ ಮುಂದೆ ತಮಟೆ ಹೊಡೆಯುವ ಹಾಗೂ ತೆರಿಗೆ ಪಾವತಿಸದೇ ಇರುವ ಆಸ್ತಿ ಮಾಲೀಕರ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಅಭಿಯಾನವನ್ನು ಪಾಲಿಕೆ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಬಾಗಮನೆ ಟೆಕ್ ಪಾರ್ಕ್ ಬಾಕಿ ಉಳಿಸಿಕೊಂಡಿದ್ದ 10 ಕೋಟಿ ರೂ.ಗಳನ್ನು ಪಾವತಿಸಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರು ತೆರಿಗೆ ಪಾವತಿಸುವಲ್ಲಿ ಆಸಕ್ತಿ ತೋರಿಸುತ್ತಿರುವುದಾಗಿ ಕಂಡುಬಂದಿದೆ. ಪಾಲಿಕೆಯಿಂದ ನೋಟಿಸ್ ಜಾರಿ ಮಾಡುವ ಮತ್ತು ಕಟ್ಟಡಗಳ ಎದುರು ತಮಟೆ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಆಸ್ತಿದಾರರು ತೆರಿಗೆ ಪಾವತಿಸುವಂತೆ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.