ಬೆಂಗಳೂರು:‘ಜಮ್ಮು- ಕಾಶ್ಮೀರದ ನಾಗರಿಕತೆಯ ಮೇಲೆ ಧರ್ಮಾಧಾರಿತ ದಾಳಿ ನಡೆಯುತ್ತಿದೆ. ಅಲ್ಲಿನ ಹಿಂದೂಗಳು ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯೆರಡನ್ನೂ ಕಳೆದುಕೊಂಡಿದ್ದಾರೆ.ರಾಜಕೀಯ ಮುಖಂಡರ ತಪ್ಪು ನಡೆಗಳಿಂದಾಗಿ ಅಲ್ಲಿನ ಶೇ 33ರಷ್ಟು ಭೂಪ್ರದೇಶದ ಮೇಲಿನ ಹಕ್ಕು ಭಾರತದ ಕೈ ತಪ್ಪಿದೆ’ ಎಂದು ಲೇಖಕ ಸಂದೀಪ್ ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಣ ಕೇಂದ್ರದ ಜಮ್ಮು-ಕಾಶ್ಮೀರ ಅಧ್ಯಯನ ಕೇಂದ್ರದ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪಾಕಿಸ್ತಾನ, ಜಿಹಾದ್ ಹಾಗೂ ರಾಜಕೀಯ- ಜಮ್ಮು-ಕಾಶ್ಮೀರದ ತೊಡಕುಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಕಾಶ್ಮೀರ ಜಿಹಾದಿಗಳ ಸ್ವರ್ಗವಾಗಿದ್ದು, ಐದಾರು ವರ್ಷಗಳ ಮಕ್ಕಳಲ್ಲೂ ಜಿಹಾದ್ ಹುಚ್ಚು ಹೆಚ್ಚುತ್ತಿದೆ. 70 ವರ್ಷಗಳಿಂದ ಇಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿಯೇ ಇದ್ದಾರೆ.. ‘ಅಮರನಾಥ ಯಾತ್ರೆ’ಗೆ ಅವರು ಬೆದರಿಕೆ ಒಡ್ಡಿದ್ದಾರೆ’ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರದ ಮುಖ್ಯಸ್ಥ ದಿಲೀಪ್ ಕಜರಿ, ‘ಜಮ್ಮು– ಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಅಲ್ಲಿ ಸಮಸ್ಯೆಗಳು ಯಾವ ರೀತಿ ಉಲ್ಬಣಿಸಿವೆ ಎಂಬುದರ ಕುರಿತು ಚರ್ಚಾಗೋಷ್ಠಿಗಳ ಮೂಲಕ ಜನರಿಗೆ ತಿಳಿಸಬೇಕಿದೆ’ ಎಂದರು.