ಬೆಂಗಳೂರು: ಶ್ರೀರಾಮಸೇವಾ ಮಂಡಲಿ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಾಂಬೆ ಸಹೋದರಿಯರಾದ ಸಿ.ಲಲಿತಾ ಹಾಗೂ ಸಿ.ಸರೋಜಾ ಅವರಿಗೆ ‘ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅವರದ್ದು ಅಮೋಘ ಸಾಧನೆ. ಐದು ದಶಕಗಳಿಂದ ಹಾಡುಗಾರಿಕೆ ಮಾಡುತ್ತಿದ್ದಾರೆ. ಎಚ್.ಎ.ಎಸ್.ಮಣಿ, ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಮತ್ತು ಟಿ.ಕೆ.ಗೋವಿಂದ ರಾವ್ ಅವರಿಂದ ಸಂಗೀತ ಕಲಿತಿದ್ದಾರೆ.
‘ಪ್ರಶಸ್ತಿಗಳು ಸಿಕ್ಕಾಗ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಸಂಗೀತದ ಮೂಲಕ ಅಭಿಮಾನಿಗಳನ್ನು ತಲುಪಬೇಕು ಎನಿಸುತ್ತದೆ. ನಮ್ಮ ಈ ಸಂಗೀತದ ಸಾಧನೆಗೆ ಗುರುಗಳು, ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಕಾರಣ’ ಎಂದು ಸಿ.ಸರೋಜಾ ತಿಳಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ, ‘ಬಾಂಬೆ ಸಹೋದರಿಯರು ಕರ್ನಾಟಕ ಸಂಗೀತಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡಲಿಯ ಅಧ್ಯಕ್ಷ ಮಣಿ ನಾರಾಯಣಸ್ವಾಮಿ, ‘ಬಾಂಬೆ ಸಹೋದರಿಯರು ಮಂಡಲಿಯ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ’ ಎಂದು ಹೇಳಿದರು.
ಯುವ ಸಮುದಾಯವು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನು ಪ್ರವೇಶಿಸಬೇಕು. ಈ ಕಲೆಯನ್ನು ಮುಂದುವರಿಸಬೇಕು ಎಂದರು.