ಬೆಂಗಳೂರು: `ಅಧಿಕಾರಿಗಳ ವಿಳಂಬ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ' ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಎಚ್ಚರಿಕೆ ನೀಡಿದರು.
ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ದುರುಪಯೋಗ ಪ್ರವೃತ್ತಿ ಮುಂದುವರೆದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳು ಮಣ್ಣುಪಾಲಾಗುತ್ತವೆ. ನೀವು (ಸಚಿವಾಲಯದ ಅಧಿಕಾರಿಗಳು) ಆಡಳಿತ ವ್ಯವಸ್ಥೆಯ ನರ ಮಂಡಲದಲ್ಲಿದ್ದೀರಿ. ಇಲ್ಲಿ ಸರಿಹೋದರೆ ದೇಶದ ಆಡಳಿತ ಸರಿ ಹೋಗುತ್ತದೆ' ಎಂದು ಅವರು ಮಾರ್ಮಿಕವಾಗಿ ಹೇಳಿದರು.
`ತಮ್ಮ ಸಹೋದರ, ಸಹೋದರಿಯರ ಜತೆಗೇ ಅಧಿಕಾರಿಗಳು ಅಧಿಕಾರ ಮದದಿಂದ ವರ್ತಿಸುವುದು ಅಕ್ಷಮ್ಯ. ಅಧಿಕಾರಿಗಳು ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಯಾವುದೇ ಕಾರ್ಯವಾದರೂ ವಿಳಂಬ ಮಾಡಬಾರದು. ವಿಳಂಬವು ವಿಷವಿದ್ದಂತೆ' ಎಂದು ಅವರು ನುಡಿದರು.
`1947ರಲ್ಲಿ ದೇಶದ ಮೊದಲ ಬಜೆಟ್ ಮಂಡಿಸಿದಾಗರೂಒಂದು ಕೋಟಿ ವಿತ್ತೀಯ ಕೊರತೆ ಇತ್ತು. ಆಗ ಅದೇ ದೊಡ್ಡ ಕೊರತೆ ಎಂದು ಕೂಗೆಬ್ಬಿಸಲಾಯಿತು. 2012- 13ರಲ್ಲಿ ವಿತ್ತೀಯ ಕೊರತೆರೂ 6 ಲಕ್ಷ ಕೋಟಿಗಳಷ್ಟಿದೆ' ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ಡಿ.ಓಬಪ್ಪ, ಕಾರ್ಯದರ್ಶಿ ಎಚ್.ರಾಜ್ಕುಮಾರ್, ಖಜಾಂಚಿ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.