ಬೆಂಗಳೂರು: ಮನಸ್ಸನ್ನು ಶಾಂತಗೊಳಿಸಿ ನೆಮ್ಮದಿ ಮತ್ತು ಆರೋಗ್ಯವನ್ನು ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ನಿವೃತ್ತ ಐಪಿಎಸ್ ಸುಭಾಷ್ ಭರಣಿ ಹೇಳಿದರು. ಇಂಡಿಯನ್ ಮ್ಯೂಜಿಕ್ ಅಸೋಸಿಯೇಷನ್ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಏಳನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಶ್ರೀಕೃಷ್ಣ ಪಾರಿಜಾತ ಕಲಾಕೇಸರಿ ದಿ. ಮುರಿಗೆಪ್ಪ ಸೋರಗಾಂವಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಗೀತವು ಕಲೆಯೂ ಹೌದು ಮತ್ತು ಮನಸ್ಸಿಗೆ ಹಿತವನ್ನು ನೀಡುವ ಔಷಧಿಯೂ ಆಗಿದೆ. ಸಂಗೀತವು ಎಂತಹ ವ್ಯಗ್ರ ಮನಸ್ಸಿಗೂ ಶಾಂತಿ ನೀಡಿ ಆಹ್ಲಾದವನ್ನುಂಟು ಮಾಡುತ್ತದೆ. ಮಕ್ಕಳಿಂದ ಹಿಡಿದು ಹಿರಿಯರು ತಲೆದೂಗುವಂತೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದರು.
ಕಲೆಯನ್ನು ಮತ್ತು ಕಲಾವಿದರನ್ನು ಗೌರವಿಸಬೇಕು. ಆಗ ಇಡೀ ನಾಡು ಸುಭಿಕ್ಷದಿಂದ ಕೂಡಿರುತ್ತದೆ. ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಆರಾಧಕರು ಮತ್ತು ರಸಿಕರು ಬಹಳ ಜನವಿದ್ದಾರೆ. ಅಂತಹವರಿಂದಲೇ ಸಂಗೀತ ಇನ್ನೂ ಜೀವಂತವಾಗಿ ಉಳಿದಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಧಾರವಾಡ ಮತ್ತು ಗದಗ ಹಿಂದೂಸ್ತಾನಿ ಸಂಗೀತದ ತವರೂರು. ಅಲ್ಲಿಯೇ ಸಂಗೀತದ ದಿಗ್ಗಜರು ಜನ್ಮ ತಾಳಿದ್ದಾರೆ. ಅವರು ಸಂಗೀತವನ್ನೇ ತಮ್ಮ ಧ್ಯೇಯವಾಗಿಸಿಕೊಂಡು ಸಂಗೀತವನ್ನೇ ಉಸಿರಾಡಿ ಬದುಕಿದರು ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಾನಂದೂರು ಕೆಂಪಯ್ಯ ಮಾತನಾಡಿ, ದಿ.ಮುರಿಗೆಪ್ಪ ಸೋರಗಾಂವಿ ಅವರು ನನ್ನ ಅನೇಕ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ಸಾಥ್ ನೀಡಿದ್ದಾರೆ. ಅವರ ಬೆರಳುಗಳು ಹಾರ್ಮೋನಿಯಂ ಮೇಲೆ ಆಡುತ್ತಿದ್ದರೆ ನಾನು ತನ್ಮಯನಾಗಿ ಹಾಡುತ್ತಿದ್ದೆ. ಅಂತಹ ಸಂಗೀತದ ಗಾರುಡಿಗರಾಗಿದ್ದರು ಎಂದು ಸ್ಮರಿಸಿದರು. ಹಿಂದೂಸ್ತಾನಿ ಸಂಗೀತದ ಕಾರ್ಯಕ್ರಮಗಳು ನಡೆದವು.