ಬೆಂಗಳೂರು: ಮಿಜೋರಾಂ ಪೊಲೀಸ್ ಮಹಾನಿರ್ದೇಶಕರಾಗಿ ನಿಯೋಜನೆಗೊಂಡಿದ್ದ ರಾಜ್ಯ ಕೇಡರ್ನ ಐಪಿಎಸ್ ಅಧಿಕಾರಿ ಲಾಲ್ ರೋಕುಮ ಪಚಾವ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ವರದಿ ಮಾಡಿಕೊಂಡಿದ್ದು, ಮುಂದಿನ ಡಿಜಿ ಮತ್ತು ಐಜಿಪಿ ಹುದ್ದೆಗೆ `ಪೈಪೋಟಿ~ ನೀಡಲಿದ್ದಾರೆ.
ಮಿಜೋರಾಂಗೆ 2007ರಲ್ಲಿ ಎರವಲು ಸೇವೆ ಮೇಲೆ ತೆರಳಿದ್ದ ಅವರು, ಅಲ್ಲಿನ ಸೇವೆಯನ್ನು ಕಡಿತ ಮಾಡಿಕೊಂಡು ರಾಜ್ಯಕ್ಕೆ ಬಂದಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ವಿ.ರಂಗನಾಥ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎ.ಎಂ.ಜಾಮದಾರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ರಾಜ್ಯ ಡಿಜಿಪಿ ಕಚೇರಿಗೆ ಅಧಿಕೃತವಾಗಿ ಅವರು ಇನ್ನೂ ವರದಿ ಮಾಡಿಕೊಂಡಿಲ್ಲ.
ಹಂಗಾಮಿ ಡಿಜಿ ಮತ್ತು ಐಜಿಪಿ ಎ.ಆರ್.ಇನ್ಫಂಟ್ ಮತ್ತು ರಜೆ ಮೇಲೆ ಇರುವ ಮತ್ತೊಬ್ಬ ಡಿಜಿಪಿ ಶಂಕರ್ ಬಿದರಿ ಅವರು ಇದೇ 31ರಂದು ನಿವೃತ್ತಿಯಾಗಲಿದ್ದಾರೆ. ಇನ್ಫಂಟ್ ಅವರಿಂದ ತೆರವಾಗುವ ಸ್ಥಾನಕ್ಕೆ ಪಚಾವ್ ನೇಮಕವಾಗುವ ಸಾಧ್ಯತೆ ಇದೆ.
ಡಿಜಿ ಮತ್ತು ಐಜಿಪಿ ನೇಮಕ ವಿವಾದ ಕೋರ್ಟ್ನಲ್ಲಿದೆ. ಈ ಕಾರಣಕ್ಕೆ ಹೊಸ ಡಿಜಿಪಿ ನೇಮಕ ಕುರಿತ ಪ್ರಕ್ರಿಯೆಯನ್ನು ಸರ್ಕಾರ ಇನ್ನೂ ಆರಂಭಿಸಿಲ್ಲ. ಯುಪಿಎಸ್ಸಿಗೆ ಪಟ್ಟಿ ಕಳುಹಿಸುವ ಕೆಲಸ ನಡೆದಿಲ್ಲ. ಇನ್ಫಂಟ್ ನಂತರ ಪಚಾವ್ ಸೇವಾ ಹಿರಿತನ ಹೊಂದಿದ್ದಾರೆ. ಹೀಗಾಗಿ ಹೊಸ ಡಿಜಿ ಮತ್ತು ಐಜಿಪಿ ನೇಮಕ ಸಂದರ್ಭದಲ್ಲಿ ಅವರ ಹೆಸರೇ ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರು 2015ರ ಏಪ್ರಿಲ್ನಲ್ಲಿ ನಿವೃತ್ತರಾಗಲಿದ್ದಾರೆ.