ಬೆಂಗಳೂರು: ಸಮಾಜದ ಮುಖ್ಯವಾಹಿನಿಯಲ್ಲಿ ಅಂಗವಿಕಲರನ್ನೂ ಸೇರ್ಪಡೆಗೊಳಿಸಲು ಒತ್ತಾಯಿಸುವ ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ‘ಇಂಡಿಯಾ ಇನ್ಕ್ಲುಷನ್ ಸಮಿಟ್ (ಭಾರತ ಒಳಗೊಳ್ಳುವಿಕೆ ಶೃಂಗಸಭೆ)–2014’ಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಜರ್ಮನಿ ಮೂಲದ ಸಾಫ್ಟ್ವೇರ್ ಕಂಪೆನಿ ‘ಸ್ಯಾಪ್’ (ಎಸ್ಎಪಿ) ಪ್ರಾಯೋಜಿತ ಎರಡು ದಿನಗಳ ಈ ಶೃಂಗಸಭೆಯ ಉದ್ಘಾಟನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಲೇಖಕ ಅರುಣ್ ಶೌರಿ, ‘ಎದುರಿಗಿರುವ ದೈಹಿಕ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾಗುವ ಸಾಮರ್ಥ್ಯ ಅಂಗವಿಕಲರಿಗಿದೆ. ಬುದ್ಧಿ ಮತ್ತೆ, ತೀಕ್ಷ್ಣತೆಯಲ್ಲಿ ಅವರು ಸಾಮಾನ್ಯ ಜನರಿಗಿಂತಲೂ ಮುಂದೆ ಇದ್ದಾರೆ. ಅವರನ್ನು ಮುಖ್ಯವಾಹಿನಿಗೆ ಸೇರಿಸಲು ಆರಂಭಿಸಲಾಗಿರುವ ಈ ಪುಟ್ಟ ಯತ್ನ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ’ ಎಂದರು.
‘ಅಂಗವಿಕಲರು ಹೊಂದಿರುವ ಸಾಮರ್ಥ್ಯ ವನ್ನು ಅರಿಯುವ ಪ್ರಯತ್ನ ಆಗಬೇಕು. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಂಪೆನಿಗಳು, ಉದ್ಯಮಿಗಳು ಉದ್ಯೋಗ ನೀಡಲು ಮುಂದೆ ಬರಬೇಕು’ ಎಂದು ಅವರು ಹೇಳಿದರು. ಮಿದುಳು ಪಾರ್ಶ್ವವಾಯುಗೆ ತುತ್ತಾಗಿರುವ, ಇಂಡಸ್ ಇಂಡ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ಧಾರ್ಥ ಜಯಕುಮಾರ್ ಮಾತನಾಡಿ, ‘ನಮ್ಮನ್ನು ಅಂಗವಿಕಲರು ಎಂದು ಗುರುತಿಸಬೇಡಿ. ಎಲ್ಲರಂತೆ ಗುರುತಿಸುವುದನ್ನು ನಾವು ಬಯಸುತ್ತೇವೆ’ ಎಂದರು.
‘ಕಚೇರಿಗಳಲ್ಲಿ ಅಂಗವಿಕಲರು ಕೂಡ ಕೆಲಸ ಮಾಡುವಂತಹ ಪೂರಕ ವಾತಾವರಣ ನಿರ್ಮಾಣವಾಗಬೇಕು. ನಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ಉತ್ತಮ ಉದ್ಯೋಗ ಕೊಡುವ ಮಾಲೀಕರು ನಮಗೆ ಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ಈ ಶೃಂಗಸಭೆಯ ಸಂಸ್ಥಾಪಕ, ಸ್ಯಾಪ್ನ ಹಿರಿಯ ಉಪಾಧ್ಯಕ್ಷ (ಜಾಗತಿಕ ಸೇವಾ ವಿಭಾಗ) ವಿ.ಆರ್. ಫೈರೋಝ್, ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಯಾದ ಎನೇಬಲ್ ಇಂಡಿಯಾ ಸಂಸ್ಥಾಪಕಿ ಶಾಂತಿ ರಾಘವನ್, ವಿಂಧ್ಯಾ ಇ–ಇನ್ಫೊಮೀಡಿಯಾ ಸೊಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ ವೈ.ಎಸ್. ಮಾತನಾಡಿದರು.
ಈ ಸಮ್ಮೇಳನದಲ್ಲಿ ನಟ ನಾಸಿರುದ್ದೀನ್ ಶಾ, ಲೇಖಕ ಡಾ. ಟೆಂಪಲ್ ಗ್ರ್ಯಾಂಡಿನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಭಾಗಿ: ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ಸಮ್ಮೇಳನದಲ್ಲಿ ಭಾಗವಹಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.