ಬೆಂಗಳೂರು: ‘ಭಾರತದಲ್ಲಿ ವಿಮೋಚನೆಯ ಧರ್ಮವಾಗಿ ಉದಯವಾಗಿ ನಂತರ ಸೋಲು ಕಂಡ ಬೌದ್ಧದಮ್ಮ, ಚೀನಾದಲ್ಲಿ ವೈದಿಕ ಧರ್ಮದ ಮಾದರಿಯಲ್ಲಿ ಗೆಲುವು ಸಾಧಿಸಿತು’ ಎಂದು ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಬೋಧಿವೃಕ್ಷ ಪ್ರಕಾಶನ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಜಿ.ಚಂದ್ರಪ್ಪ ಅವರ ‘ಪ್ರಾಚೀನ ಚೀನಾದಲ್ಲಿ ಬೌದ್ಧದಮ್ಮ’ ಮತ್ತು ‘ಭಾರತ ಮತ್ತು ಚೀನಾ ದೇಶಗಳಲ್ಲಿ ವಿಶೇಷ ಆರ್ಥಿಕ ವಲಯ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಸ್ತಕ ಬಿಡುಗಡೆಗೊಳಿಸಿದ ಲೇಖಕ ರಂಗಾರೆಡ್ಡಿ ಕೋಡಿರಾಮಪುರ, ‘ವಿಶೇಷ ಆರ್ಥಿಕ ವಲಯದ ಹುನ್ನಾರದಿಂದಾಗಿ ಬಡ ರೈತರು ಭೂಮಿ ಕಳೆದುಕೊಂಡು ಸೂಕ್ತ ಪರಿಹಾರವನ್ನೂ ಕಾಣಲಾಗದೆ ಅವರದ್ದೇ ನೆಲದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕ ಡಾ.ಜಿ.ರಾಮಕೃಷ್ಣ, ‘ಬೌದ್ಧದಮ್ಮದಲ್ಲಿ ಹೀನಾಯಾನ ಪಂಥ ರೂಪಿಸಿಕೊಂಡಿದ್ದ ನಂಬಿಕೆಗಳನ್ನು ಮಹಾಯಾನ ಪಂಥದವರು ಕಳಚಿ ಕೊಳ್ಳುತ್ತಾ ಹೋದರು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಪ್ರಾಚೀನ ಚೀನಾದಲ್ಲಿ ಬೌದ್ಧದಮ್ಮ’ ಪುಸ್ತಕದ ಬೆಲೆ ₨ 140 ಮತ್ತು ‘ಭಾರತ ಮತ್ತು ಚೀನಾ ದೇಶಗಳಲ್ಲಿ ವಿಶೇಷ ಆರ್ಥಿಕ ವಲಯ’ ಪುಸ್ತಕದ ಬೆಲೆ ₨ 260. ಬೋಧಿವೃಕ್ಷ ಪ್ರಕಾಶನ ಸಂಸ್ಥೆ ಎರಡೂ ಪುಸ್ತಕಗಳನ್ನು ಹೊರತಂದಿದೆ.