ಕಮಲನಗರ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳುವ ಮೂಲಕ ಉತ್ತಮಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂದು ಡಿಗ್ಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಧನರಾಜ ಮೇತ್ರೆ ಹೇಳಿದರು.
ತಾಲ್ಲೂಕಿನ ಡಿಗ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪರಿಸರ ಮಾಲಿನ್ಯ ನಿಯಂತ್ರಣ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಅಧ್ಯಯನಶೀಲತೆ ಮೂಲಕ ಗುರಿ ಸಾಧಿಸುವ ಕಡೆ ಗಮನಹರಿಸಬೇಕು ಎಂದರು.
ವಿದ್ಯಾರ್ಥಿಗಳು ಟಿವಿ, ಮೊಬೈಲ್, ಬಳಸುವ ಮೂಲಕ ಸಮಯ ವ್ಯರ್ಥ ಮಡುತ್ತಿದ್ದಾರೆ. ಈ ಕುರಿತು ಪೋಷಕರು ಸೇರಿದಂತೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ರಾಜಕುಮಾರ ಪಾಟೀಲ ಮಾತನಾಡಿ,‘ವಿದ್ಯಾರ್ಥಿಗಳು ಸಮಾಜ ತಮಗೆ ಏನು ನೀಡಿದೆ ಎಂದು ಪ್ರಶ್ನಿಸುವ ಮೊದಲು ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಅಥವಾ ಏನೇನು ನೀಡಬಹುದು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜ ಸೇವೆಯಿಂದ ಶಾಶ್ವತವಾಗಿ ಉಳಿಯುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂದಾನುಕರಣೆಯಲ್ಲಿ ದೇಶಿ ಸಂಸ್ಕೃತಿ’ ಮರೆಯಬಾರದು ಎಂದರು.
ಎಸ್ಡಿಎಂಸಿ ನಾಮನಿರ್ದೇಶಕ ಸಂತೋಷ ವೈಜನಾಥ ಬನವಾಸೆ, ಶಿಕ್ಷಕಿ ವಿಜಯಲಕ್ಷ್ಮೀ ಪಾಟೀಲ, ಆರತಿ ಮಡಿವಾಳಪ್ಪ ರಾಮಪುರೆ, ಅಶೋಕ ಪಾಟೀಲ, ಸಂತೋಷ ಬಿರಾದಾರ, ರೇಣುಕಾ ಜುಲ್ಫೆ, ಡಿಇಒ ಧನರಾಜ ಶ್ರೀಗಿರೆ ಹಾಗೂ ಮಕ್ಕಳು ಇದ್ದರು.