ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳಕೆಯಾಗದ ವಿದ್ಯಾರ್ಥಿನಿಯರ ವಸತಿ ನಿಲಯ

ಸರ್ಕಾರದ ಹಲವು ಕಟ್ಟಡಗಳು ಖಾಲಿ; ಕಚೇರಿಗಳು ಮಾತ್ರ ಬಾಡಿಗೆಯಲ್ಲಿ
ಗಣಪತಿ ಕುರನ್ನಳೆ
Published 24 ಜನವರಿ 2024, 5:05 IST
Last Updated 24 ಜನವರಿ 2024, 5:05 IST
ಅಕ್ಷರ ಗಾತ್ರ

ಕಮಲನಗರ: ಕಮಲನಗರ ತಾಲ್ಲೂಕು ಘೋಷಣೆಯಾಗಿ ಕೆಲ ವರ್ಷಗಳೇ ಕಳೆದಿವೆ. ಕೆಲ ಕಚೇರಿಗಳೂ ಪ್ರಾರಂಭಗೊಂಡಿವೆ. ಆದರೆ ಅವುಗಳಿಗೆ ಇನ್ನೂ ಸ್ವಂತ ಕಟ್ಟಡಗಳಿಲ್ಲ. ಆದರೆ ಇಲ್ಲೊಂದು ಸ್ವಂತ ಕಟ್ಟಡವಿದ್ದರೂ ಆದರ ಬಳಕೆಯಾಗುತ್ತಿಲ್ಲ.

ನಾಲ್ಕು ವರ್ಷಗಳ ಹಿಂದೆ ಕಮಲನಗರ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿನಿಯರಿಗೋಸ್ಕರ ವಿದ್ಯಾರ್ಥಿ ನಿಲಯವನ್ನು ಸುಮಾರು ₹60 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ ನಾಲ್ಕು ವರ್ಷಗಳಿಂದ ಅದನ್ನು ಬಳಕೆ ಮಾಡುತ್ತಿಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ತಿಳಿಸಿದ್ದಾರೆ.

‘ಹಲ್ಲು ಇದ್ದರೆ ಕಡಲೇ ಇಲ್ಲ, ಕಡಲೆ ಇದ್ದರೆ ಹಲ್ಲು ಇಲ್ಲ ಎಂಬಂತಾಗಿದೆ. ಕಮಲನಗರ ತಾಲ್ಲೂಕಿನ ವ್ಯವಸ್ಥೆ. ನೂತನ ತಾಲ್ಲೂಕು ಘೋಷಣೆಯಾಗಿದ್ದು ತಹಶೀಲ್ದಾರ್ ಕಚೇರಿ, ತಾಲ್ಲೂಕಾ ಪಂಚಾಯತ್ ಕಚೇರಿಗಳಿಗೆ ಸ್ವಂತ ಕಟ್ಟಡ ಇರದಿದ್ದರೂ ಅಧಿಕಾರಿಗಳು ಕೆಲಸ ಸುಗಮವಾಗಿ ನಡೆಸುತ್ತಿದ್ದಾರೆ. ಬೇರೆ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಕಚೇರಿ ತೆರೆದಿದ್ದಾರೆ. ಆದರೆ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿದ ಈ ಕಟ್ಟಡ ಖಾಲಿ ಬಿದ್ದಿದೆ.

ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಿದೆ ಎಂದು ಔರದ್‌ಗೆ ಮಕ್ಕಳನ್ನು ವರ್ಗಾಯಿಸಿದ್ದಾರೆ. ಹೀಗಾಗಿ ಸರ್ಕಾರಿ ಕಟ್ಟಡ ಪ್ರಯೋಜನವಾಗುತ್ತಿಲ್ಲ. ಇಂಥಹ ವ್ಯವಸ್ಥೆಯಡಿ ಒಂದೊಂದಾಗಿ ಕೆಲವು ಆಡಳಿತ ಕಚೇರಿಗಳು ವರ್ಗವಾಗುತ್ತಿವೆ. ಸರ್ಕಾರಿ ಉರ್ದು ಮಾಧ್ಯಮದ ಫ್ರೌಢಶಾಲೆ ಕಮಲನಗರದಿಂದ ಹೋಳಸಮುದ್ರಕ್ಕೆ ವರ್ಗಾವಣೆಯೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜನಾರ್ದನ್ ಸಾವರಗೆಕರ್.

ಕಮಲನಗರ ತಾಲ್ಲೂಕಿನಲ್ಲಿ ಇಂತಹ ಇನ್ನೂ ಹಲವಾರು ಕಟ್ಟಡಗಳಿವೆ. ಅವುಗಳು ನಿಷ್ಪ್ರಯೋಜಕವಾಗಿವೆ. ಅಲ್ಲದೇ ಉಪಯೋಗವಿಲ್ಲದ್ದರಿಂದ, ಹಾಳಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಈ ಕಡೆ ಗಮನಹರಿಸಿ ಕಟ್ಟಡಗಳ ಸಮೀಕ್ಷೆ ಮಾಡಿಸಿ, ಸರ್ಕಾರದ ಬೇರೆ ಕಚೇರಿಗಳನ್ನು ಅವುಗಳಲ್ಲಿ ನಡೆಸಲು ಅನುವು ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಮಾತು. 

ಕಮಲನಗರದ ವಿದ್ಯಾರ್ಥಿ ನಿಲಯದ ಕಟ್ಟಡವು ತಾತ್ಕಾಲಿಕವಾಗಿ ಖಾಲಿಯಿದೆ. ಮುಂದೆ ಮಕ್ಕಳು ಬಂದರೆ ಕಟ್ಟಡವು ಉಪಯೋಗವಾಗುತ್ತದೆ

– ಅನಿಲಕುಮಾರ ಸಮಾಜಕಲ್ಯಾಣ ಅಧಿಕಾರಿ ಔರಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT