ಬೀದರ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಕ್ಕೆ ಚುನಾವಣೆಯನ್ನು ನಡೆಸುವ ಮೂಲಕ ಮಾನ್ಯತೆ ನೀಡಬೇಕು ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಅವರು ಸಾರಿಗೆ ಸಚಿವರನ್ನು ಆಗ್ರಹಪಡಿಸಿದರು.
ಬುಧವಾರ ರಂಗಮಂದಿರದಲ್ಲಿ ನಡೆದ ಸಂಘಟನೆಯ ಬೀದರ್ ವಿಭಾಗೀಯ ಯೂನಿಯನ್ನ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು ಇರುವ ಕಾರಣ ಬೇಡಿಕೆಗಳ ಬಗೆಗೆ ಸರ್ಕಾರದ ಜೊತೆಗೆ ಮಾತುಕತೆ ನಡೆಸುವುದು ಗೊಂದಲ ಆಗಲಿದೆ ಎಂದರು.
ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಸಂಸ್ಥೆಯ ಕಾರ್ಮಿಕ ಸಂಘಟನೆಗೆ ಚುನಾವಣೆ ನಡೆಸಲು ಅವಕಾಶ ನೀಡಬೇಕು. ಯಾವ ಸಂಘಟನೆಗೆ ಗೆಲುವು ದೊರೆಯಲಿದೆಯೋ ಅದರ ಜೊತೆಗೆ ಮಾತುಕತೆ ನಡೆಸಬಹುದು. ಇದರಿಂದ ಯಾವುದೇ ಗೊಂದಲ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಉಳಿದಂತೆ, ಸಮ್ಮೇಳನವು ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನುಒಂದುಗೂಡಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು.
ಸಿಬ್ಬಂದಿಗಳ ಮೇಲಿರುವ ಒತ್ತಡವನ್ನುಕಡಿಮೆ ಮಾಡಲು ಆಡಳಿತ, ತಾಂತ್ರಿಕ, ಚಾಲಕ, ನಿರ್ವಾಹಕ, ಚಾಲಕ-ಕಂ-ನಿರ್ವಾಹಕ, ಭದ್ರತಾ ತರಬೇತಿ ನಿರತ ಸಿಬ್ಬಂದಿಗೆ ಪ್ರೊಭೆಷನರಿ ಸೇವೆಗೆ ಬಡ್ತಿ ನೀಡಬೇಕು. ಸಿಬ್ಬಂದಿ ಅನುಪಾತವನ್ನು 8ಕ್ಕೆ ಹೆಚ್ಚಿಸಬೇಕು; ವಿಶ್ರಾಂತಿ ಗೃಹ ಸೇರಿದಂತೆ ಮಹಿಳಾ ಸಿಬ್ಬಂದಿಗೆ ಉತ್ತಮ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಿತು.
ಮೆರವಣಿಗೆ: ಇದಕ್ಕೂ ಮುನ್ನ ಸಿಬ್ಬಂದಿ, ನೌಕರರು ಮೆರವಣಿಗೆಯಲ್ಲಿ ಕಾರ್ಯಕ್ರಮ ನಡೆದ ರಂಗಮಂದಿರಕ್ಕೆ ಆಗಮಿಸಿದರು.
ಕಾರ್ಮಿಕ ಮುಖಂಡರಾದ ಶೌಕತ್ ಅಲಿ ಅಲೂರ, ಸಿದ್ದಪ್ಪ ಪಾಲ್ದಿ, ಫಕ್ರುದ್ದಿನ್, ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ನೌಕರ ಸಂಘಟನೆಯ ಬೀದರ ವಿಭಾಗದ ಗೌರವಾಧ್ಯಕ್ಷ ಬಾಬುರಾವ್ ಹೊನ್ನಾ, ಬೀದರ್ ವಿಭಾಗದ ಅಧ್ಯಕ್ಷ ಮಲ್ಲಪ್ಪಾ,ಮುಖಂಡ ಶಫಿಯೋದ್ದೀನ್ ಮತ್ತು ಇತರ ಮುಖಂಡರು ಇದ್ದರು.