ಬೀದರ್: ವಿದ್ಯಾರ್ಥಿಗಳ ವಾರ್ಷಿಕ ಬಸ್ಪಾಸ್ ದರದಲ್ಲಿ ಶೇ 20 ರಷ್ಟು ರಿಯಾಯಿತಿ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.
ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಿಷತ್ ಹೋರಾಟದ ಫಲವಾಗಿ ಸರ್ಕಾರ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಬಸ್ಪಾಸ್ ರಜಾ ದಿನಗಳಿಗೂ ಅನ್ವಯಿಸಲಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡಬೇಕಾಗಿತ್ತು. ಪರಿಷತ್ ಈ ಬಗ್ಗೆ ಸರ್ಕಾರದ ಗಮನ ಸೆಳೆದಿತ್ತು. ಹೀಗಾಗಿ ಇದೀಗ ಸಾರಿಗೆ ಅಧಿಕಾರಿಗಳೇ ಕಾಲೇಜುಗಳಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪರವಾನಗಿ ನೀಡಲಿದ್ದಾರೆ ಎಂದು ಹೇಳಿದರು.
ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ್ ಎಂ., ವಿನಾಯಕ್ ದೇಶಪಾಂಡೆ, ರಾಹುಲ್ ಗಾದಾ, ಪ್ರದೀಪ್ ಪಾಟೀಲ್, ಸೋಮನಾಥ ಸ್ವಾಮಿ, ರಾಹುಲ್ ಪಾಟೀಲ್, ಪುಷ್ಪಕ್ ಜಾಧವ್, ಪ್ರದೀಪ ಖಂಡ್ರೆ, ವಿಶಾಲ್ ಸ್ವಾಮಿ ಮೊದಲಾದವರು ಇದ್ದರು.