ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ನೆಟ್ಟು ಪೋಷಿಸಿ, ಆದಾಯವನ್ನೂ ಪಡೆಯಿರಿ

ರೈತರಿಗೆ ನೆರವಾಗಲಿದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಸಸಿಗಳನ್ನು ನೆಡಲು ಈಗ ಸಕಾಲ
Last Updated 19 ಮೇ 2019, 19:34 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತರು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಲಭ್ಯವಿರುವ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದರೆ ಪ್ರೋತ್ಸಾಹಧನ ನೀಡುವಂತಹ ಅರಣ್ಯ ಇಲಾಖೆಯ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಅನುಷ್ಠಾನಕ್ಕೆ ಇದು ಸಕಾಲ.

ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಈಗ ಗಿಡಗಳನ್ನು ನೆಟ್ಟರೆ ಅವು ಬದುಕುಳಿಯಬಹುದು. ಅರಣ್ಯೇತರ ಪ್ರದೇಶಗಳಲ್ಲಿ ಹಸಿರು ಬೆಳೆಸುವ ಉದ್ದೇಶದಿಂದ 2011ರಲ್ಲಿ ಜಾರಿಗೆ ಬಂದಿರುವ ಈ ಯೋಜನೆ ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಬಲ್ಲದು.

ಅರಣ್ಯ ಇಲಾಖೆಯಿಂದ ರೈತರು ರಿಯಾಯಿತಿ ದರದಲ್ಲಿ ಗಿಡಗಳನ್ನು ಖರೀದಿಸಿ, ತಮ್ಮ ಜಮೀನಿನಲ್ಲಿ ಕೃಷಿಯ ಜೊತೆಗೆ ಸಸಿಗಳನ್ನೂ ನೆಟ್ಟು ಪೋಷಿಸಿದರೆ ಇಲಾಖೆ ಅವರಿಗೆ ಪ್ರೋತ್ಸಾಹಧನ ನೀಡುತ್ತದೆ. ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಿದರೆ ವರ್ಷದ ಲೆಕ್ಕದಲ್ಲಿ ಹಣವನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತದೆ.

1.25 ಲಕ್ಷ ಗಿಡ ಲಭ್ಯ:ಯೋಜನೆಯ ಅಡಿಯಲ್ಲಿ ಗಿಡಗಳನ್ನು ವಿತರಿಸಲುಗುಂಡ್ಲುಪೇಟೆ ವಲಯದ ಕಚೇರಿಯಲ್ಲಿ 1.25 ಲಕ್ಷ ಗಿಡಗಳು ಲಭ್ಯವಿವೆ. ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಆದಾಯ ಬರುವಂತಹ ಗಿಡಗಳನ್ನೇ ಇಲಾಖೆ ಬೆಳೆಸಿದೆ. ಹೆಬ್ಬೇವು, ಶ್ರೀಗಂಧ, ನಲ್ಲಿ, ಹುಣಸೆ, ತೇಗ ಮೊದಲಾದ ಗಿಡಗಳು ಇವೆ. ರೈತರು ದಾಖಲೆಗಳನ್ನು ಸಲ್ಲಿಸಿ, ರಿಯಾಯಿತಿ ದರದಲ್ಲಿ ಖರೀದಿಸಬಹುದು. ಒಬ್ಬರಿಗೆ ಗರಿಷ್ಠ 440 ಗಿಡಗಳನ್ನು ನೀಡಲಾಗುತ್ತದೆ.

6ರಿಂದ 9 ಇಂಚಿನವರೆಗೆ ಬೆಳೆದಿರುವ ಗಿಡಕ್ಕೆ ₹ 1, 8ರಿಂದ 12 ಇಂಚುಗಳಷ್ಟು ಎತ್ತರದ ಸಸಿಗೆ ₹ 3 ನಿಗದಿ ಮಾಡಲಾಗಿದೆ.

‘ಸಸಿಯನ್ನು ನೆಟ್ಟು ಬೆಳೆಸಿದರೆ ಮೊದಲ ವರ್ಷ ಪ್ರತಿ ಸಸಿಗೆ ₹ 30, ಎರಡನೇ ವರ್ಷ ₹ 30 ಮತ್ತು ಮೂರನೇ ವರ್ಷ ಪ್ರತಿ ಗಿಡಕ್ಕೆ ₹ 40 ನೀಡಲಾಗುತ್ತದೆ. ಅಂದರೆ, ಒಂದು ಗಿಡವನ್ನು ಮೂರು ವರ್ಷ ಕಾಪಾಡಿದರೆ ಇಲಾಖೆ ₹ 100 ಪ್ರೋತ್ಸಹಧನ ನೀಡುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಯೋಜನೆಯ ಅಡಿಯಲ್ಲಿರೈತರಿಗೆ ಸಸಿಗಳನ್ನು ವಿತರಣೆ ಮಾಡಿ ಅವುಗಳನ್ನು ಪೋಷಿಸುವಂತೆ ಮನವೊಲಿಸಲು ಅಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ. ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಇಲಾಖೆಯ ಸಹಕಾರವನ್ನೂ ಕೋರಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿರಾಜೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣಿನ ಸವಕಳಿ ತಡೆಯಬಹುದು,‌ ಆದಾಯವೂ ಬರುತ್ತದೆ’

ಮಳೆ ಆರಂಭವಾಗಿರುವುದರಿಂದ ಸಸಿಗಳನ್ನು ನೆಡಲು ಇದು ಒಳ್ಳೆಯ ಸಮಯ. ಜಮೀನುಗಳ ಬದಿಗಳಲ್ಲಿ ಈಗ ಗಿಡಗಳನ್ನು ನೆಟ್ಟರೆ, ಅವುಗಳನ್ನು ಬೆಳೆಸುವುದು ಸುಲಭ. ಈ ಸಸಿಗಳು ಏಳೆಂಟು ವರ್ಷಗಳಲ್ಲಿ ಉತ್ತಮ ಆದಾಯವನ್ನೂ ತಂದುಕೊಡುತ್ತದೆ. ಇದು ಮಾತ್ರವಲ್ಲದೆ ಗಿಡಗಳಿಂದಾಗಿ ಮಣ್ಣಿನ ಸವೆತವನ್ನು ತಡೆಯಬಹುದು. ಪರಿಸರ ಸಮಲೋಲನವನ್ನೂ ಕಾಯ್ದುಕೊಳ್ಳಬಹುದು’ ಎಂದು ರಾಜೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT