ಚಾಮರಾಜನಗರ: ‘ಮೈಸೂರು ಮತ್ತು ಚಾಮರಾಜನಗರ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಸೋಲುವ ಭಯದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಕರೆ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ. ಸಿದ್ದರಾಮಯ್ಯ ಅವರ ನರಿ ಬುದ್ಧಿ ಸಂಸದರಿಗೆ ತಿಳಿದಿದ್ದು, ಅವರು ಕಾಂಗ್ರೆಸ್ಗೆ ಬೆಂಬಲ ನೀಡುವುದಿಲ್ಲ’ ಎಂದು ಬಿಜೆಪಿ ಮುಖಂಡ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಭಾನುವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ಮಾಡಿದ ಅಪಮಾನವನ್ನು ಮರೆತಿರಬಹುದು. ಅಧಿಕಾರ ಬಂದಾಗ ಹಿರಿಯರು ಎಂಬುದನ್ನು ಲೆಕ್ಕಿಸದರೆ ಅವರನ್ನು ಸಂಪುಟದಿಂದ ಕಿತ್ತೊಗೆದು, ಕಾಂಗ್ರೆಸ್ ಪಕ್ಷದಿಂದಲೇ ಹೊರ ಹೋಗುವಂತೆ ಮಾಡಿದ್ದು, ಉಪ ಚುನಾವಣೆಯನ್ನು ಅವರನ್ನು ಸೋಲಿಸುವ ಮೂಲಕ ಸಂಸದರಿಗೆ ಅಪಮಾನ ಮಾಡಿದ್ದಾರೆ. ಈಗ, ‘ಎಲ್ಲವನ್ನೂ ಮರೆತು ನಾವು ಒಂದಾಗೋಣ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನರಿ ಬುದ್ದಿ ಪ್ರದರ್ಶನ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದಿದ್ದಾರೆ. ದೇಶಕ್ಕೆ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ. ಯುವ ಸಮುದಾಯ ಬಿಜೆಪಿಯನ್ನು ಬೆಂಬಲಿಸಬೇಕು ಎಂದೂ ಹೇಳಿದ್ದಾರೆ’ ಎಂದರು.
‘ಸ್ವಕ್ಷೇತ್ರದಲ್ಲಿ ಆತ್ಮೀಯ ಸ್ನೇಹಿತನ ಮಗ ಸುನೀಲ್ ಬೋಸ್ ಗೆಲ್ಲಿಸಿಕೊಂಡರೆ ಮಾತ್ರ ಸಿ.ಎಂ ಕುರ್ಚಿ ಉಳಿದುಕೊಳ್ಳುತ್ತದೆ ಎಂಬ ಸತ್ಯವನ್ನು ಅರಿತಿರುವ ಸಿದ್ದರಾಮಯ್ಯ, ಬಿಜೆಪಿಯಲ್ಲಿರುವ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸುವುದು. ಅವರು ಸೇರ್ಪಡೆಗೆ ಒಪ್ಪದಿದ್ದರೆ ಮಾಧ್ಯಮಗಳ ಮೂಲಕ ಕಾಂಗ್ರೆಸ್ ಸೇರ್ಪಡೆ ಯಾಗುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಲು ಇವರು ಮಾಡುತ್ತಿರುವ ಪಿತೂರಿ ನಡೆಯುವುದಿಲ್ಲ’ ದೇಶದಾದ್ಯಂತ ನರೇಂದ್ರ ಮೋದಿ ಆಲೆ ಎದ್ದಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಮೈಸೂರು ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದು ನಿಜಗುಣರಾಜು ತಿಳಿಸಿದರು.
'ನಾನು ಕೂಡ ಕಾಂಗ್ರೆಸ್ ಸೇರುತ್ತಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ನಾನು ಬಿಜೆಪಿ ತತ್ವ ಸಿದ್ದಾಂತ ಮತ್ತು ವಿಚಾರವನ್ನಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಹಿಂದುತ್ವದ ಪ್ರತಿಪಾದಕನಾಗಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಬಿಜೆಪಿಯಲ್ಲೇ ಇದ್ದೇನೆ. ಮುಂದೆಯೂ ಇರುತ್ಜೇನೆ’ ಎಂದರು.
ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಮುಖಂಡ ಕಿಲಗೆರೆ ಬಸವರಾಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಕುಮಾರ್, ನಗರ ಮಂಡಲದ ಅಧ್ಯಕ್ಷ ಶಿವರಾಜನಾಯಕ, ರೈತ ಮೋರ್ಚಾ ಉಪಾಧ್ಯಕ್ಷ ಚಿನ್ನಮುತ್ತು, ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡಹಳ್ಳಿ ಮೂರ್ತಿ ಇತರರು ಭಾಗವಹಿಸಿದ್ದರು.