ಕೊಳ್ಳೇಗಾಲ: ತಾಲ್ಲೂಕಿನ ಧನಗೆರೆ ಗ್ರಾಮದ ಬಳಿ ಕಾರು ಪಲ್ಟಿ ಹೊಡೆದ ಪರಿಣಾಮ ಚಾಲಕ, ಮಕ್ಕಳು ಸೇರಿ 12 ಮಂದಿಗೆ ಗಾಯವಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಅಂಚಟ್ಟಿ ತಾಲ್ಲೂಕಿನ ಅರತ್ಕಲ್ ಗ್ರಾಮದ ನಿಂಗೇಗೌಡ, ಚಂದ್ರ, ಮೋಟಮ್ಮ, ಶಿವಮ್ಮ, ಆನಂದ, ಶಿವಮ್ಮ, ಮಾದಪ್ಪ, ಶಿವಮ್ಮ, ರುದ್ರಮ್ಮ, ಚಿಕ್ಕಭೈರಪ್ಪ ಹಾಗೂ ಕನಕಪುರ ಸಮೀಪದ ತಟ್ಟಿಗುಪ್ಪೆ ಗ್ರಾಮದ ಅಮೂಲ್ಯ, ಗಗನ್ ಗಾಯಗೊಂಡವರು.
ಮಹದೇಶ್ವರ ಬೆಟ್ಟದಲ್ಲಿ ಪೂಜೆ ಮುಗಿಸಿ ವಾಪಾಸು ಕನಕಪುರ ಮಾರ್ಗವಾಗಿ ತಮ್ಮ ಊರಿಗೆ ತೆರಳುವಾಗ ಧನಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿ ಕಾರು ಪಲ್ಟಿ ಹೊಡೆದು ತಿಪ್ಪೆ ಗುಂಡಿಗೆ ಉರುಳಿದೆ. ಸ್ಥಳೀಯರು ಆಂಬುಲೆನ್ಸ್ ಕರೆಯಿಸಿ ಗಾಯಾಳುಗಳನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.