ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯದಲ್ಲಿ ಸುಳ್ಳು ವಂಶವೃಕ್ಷದ ದಾಖಲೆ ನೀಡಿ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವ) ಪಡೆದಿದ್ದ ಬಿ.ಆರ್.ರಂಗನಾಥ ಅವರನ್ನು ಕೆಲಸದಿಂದ ವಜಾಗೊಳಿಸಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಹೇಶ್ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ಡಿ.13ರಂದು ಈ ಆದೇಶ ಹೊರಡಿಸಲಾಗಿದೆ. ರಂಗನಾಥ ಅವರು 2010ರ ಅಕ್ಟೋಬರ್ನಲ್ಲಿ ಕಟ್ಟಿಗೆ ಹುದ್ದೆಗೆ ನೇಮಕಗೊಂಡಿದ್ದರು.
ವಂಶಪಾರಂಪರ್ಯವಾಗಿ ಸಿಗುವ ಈ ಹುದ್ದೆಯನ್ನು ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿ ಪಡೆದಿದ್ದಾರೆ ಎಂದು ರತ್ನಮ್ಮ ಎಂಬುವವರು ದೂರು ನೀಡಿದ್ದರು. ಜಿಲ್ಲಾಡಳಿತ ಮಾತ್ರವಲ್ಲದೇ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು.
ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿರುವುದು ತನಿಖೆಯಿಂದ ಸಾಬೀತಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ನೀಡಿದ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿಯವರು ರಂಗನಾಥ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ.