ಚಾಮರಾಜನಗರ: ಒಳಮೀಸಲಾತಿ ಕಲ್ಲಿಸುವ ಸಂಬಂಧ ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯ ಚುನಾವಣಾ ಗಿಮಿಕ್ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಸೋಮವಾರ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘2013–18ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದಾಗ ಒಳಮೀಸಲಾತಿ ಜಾರಿ ಬಗ್ಗೆ ಏನೂ ಮಾಡದೇ ಇದ್ದ ಸಿದ್ದರಾಮಯ್ಯ ಅವರು ಈಗ ಲೋಕಸಭಾ ಚುನಾವಣಾ ಹತ್ತಿರ ಬರುವಾಗ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಒಳಮೀಸಲಾತಿ ಜಾರಿ ಮಾಡಬೇಕಾದರೆ ಸಂವಿಧಾನದ 341ನೇ ಪರಿಚ್ಛೇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕು ಎಂದು ಹೇಳುವ ಮೂಲಕ ಕೇಂದ್ರವನ್ನು ಹೊಣೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದರು.
'ಪರಿಶಿಷ್ಟ ಜಾತಿಯ ವರ್ಗೀಕರಣ ಬಗ್ಗೆ ದೆಹಲಿ ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಉಷಾ ಮಿಶ್ರಾ ಸಮಿತಿ ಸಂವಿಧಾನದ 341 ಪರಿಚ್ಛೇದಕ್ಕೆ ತಿದ್ದುಪಡಿ ತರವೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, 2020ದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತಿದ್ದುಪಡಿ ಅಗತ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತ್ತು’ ಎಂದು ಶಿವಣ್ಣ ಹೇಳಿದರು.
'ಸಿದ್ದರಾಮಯ್ಯ ಅವರು ಯಾವಾಗಲೂ ದಲಿತ ಎಡಗೈ ಸಮುದಾಯದ ಮೇಲೆ ಕಾಳಜಿ ತೋರಿಲ್ಲ. ಒಳಮೀಸಲಾತಿ ಕಲ್ಪಿಸಲು ಪ್ರಯತ್ನ ಪಟ್ಟಿದ್ದು ಬಿಜೆಪಿ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದ್ದು ಮಾತ್ರವಲ್ಲದೆ, ಮೀಸಲಾತಿಯನ್ನು ವರ್ಗೀಕರಣ ಮಾಡಿ ಆದೇಶವನ್ನೂ ಹೊರಡಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಒಳಮೀಸಲಾತಿ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಸರ್ಕಾರದ ಈ ನಿರ್ಣಯ, ಅವರ ಹೇಳಿಕೆ ಚುನಾವಣಾ ಹೊಸ್ತಿಲಿನಲ್ಲಿ ಎಡಗೈ ಸಮುದಾಯವನ್ನು ದಾರಿ ತಪ್ಪಿಸುವ ತಂತ್ರ. ಸಮುದಾಯದವರು ಇದಕ್ಕೆ ಮರುಳಾಗಬಾರದು’ ಎಂದು ಅವರು ಹೇಳಿದರು.
ಸಮುದಾಯದ ಮುಖಂಡರಾದ ಬಸವನಪುರ ರಾಜಶೇಖರ್, ಎಸ್. ಬಸವರಾಜು, ಕೆಸ್ತೂರು ಮರಪ್ಪ, ಆರ್.ರಾಜು, ಶಿವಕುಮಾರ್, ಲಿಂಗರಾಜು ಇದ್ದರು.
‘ಸ್ಥಳೀಯರಿಗೆ ಟಿಕೆಟ್ ಕೊಡಿ ನಾನೂ ಆಕಾಂಕ್ಷಿ’ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಅವರು ‘ನರೇಂದ್ರ ಮೋದಿ ಅವರ ಪರವಾಗಿ ರಾಜ್ಯದಲ್ಲಿ ಅಲೆ ಇದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಾನು ಎಚ್.ಡಿ.ಕೋಟೆಯವನು. ಅದು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಟಿಕೆಟ್ ಕೇಳುತ್ತಿದ್ದೇನೆ’ ಎಂದರು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬುದು ನನ್ನ ಆಶಯ. ನಾನು ಹಿರಿಯ. ಅನುಭವವಿದೆ. ಅವಕಾಶ ಸಿಕ್ಕಿದಾಗಲೆಲ್ಲ ಕೆಲಸ ಮಾಡಿದ್ದೇನೆ. ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ವರಿಷ್ಠರಿಗೆ ಮನವಿಯನ್ನೂ ಮಾಡಿದ್ದೇನೆ. ಟಿಕೆಟ್ ನೀಡುವ ವಿಶ್ವಾಸವಿದೆ. ಅವರ ನಿರ್ಧಾರಕ್ಕೇ ಬಿಟ್ಟಿದ್ದೇನೆ’ ಎಂದರು.