ಚಾಮರಾಜನಗರ: ಈ ವಾರ ಸಂಕ್ರಾಂತಿ ಹಬ್ಬದ ಪ್ರಭಾವ ಮಾರುಕಟ್ಟೆಯ ಮೇಲಾಗಿದೆ. ಹೂವು ಹಾಗೂ ಕೆಲವು ತರಕಾರಿಗಳ ಬೆಲೆ ಹೆಚ್ಚಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಧಾರಣೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ, ಇದು ತಾತ್ಕಾಲಿಕ. ಇನ್ನು ಒಂದೆರಡು ದಿನಗಳಲ್ಲಿ ಮತ್ತೆ ಕಡಿಮೆಯಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.
ನಗರದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಶನಿವಾರದಿಂದ ಹೂವುಗಳ ಬೆಲೆ ಏರುಮುಖವಾಗಿದೆ. ಹಬ್ಬಕ್ಕಾಗಿ ಹೂವು ಖರೀದಿ ಮಾಡಲು ಜನರು ಹೆಚ್ಚು ದುಡ್ಡು ತೆರಬೇಕಾಯಿತು.
ಸೋಮವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರದ ಧಾರಣೆ ₹800ರಿಂದ ₹1000ದವರೆಗೆ ಇತ್ತು.
ಮಾರುಕಟ್ಟೆಗೆ ಕಾಕಡ ಬರಲು ಆರಂಭಿಸಿದ್ದು, ಕೆಜಿಗೆ ₹500ರಿಂದ ₹700 ಇದೆ. ಸೇವಂತಿಗೆ, ಚೆಂಡು ಹೂವುಗಳ ಧಾರಣೆಯೂ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಬಟನ್ ಗುಲಾಬಿಗೂ ಬೇಡಿಕೆ ಜಾಸ್ತಿ ಇದ್ದು, ಕೆಜಿಗೆ ₹200ರಿಂದ ₹300 ಇದೆ.
ಬೀನ್ಸ್, ಅವರೆ ತುಟ್ಟಿ: ತರಕಾರಿ ಮಾರುಕಟ್ಟೆಯಲ್ಲೂ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಬೀನ್ಸ್ ಬೆಲೆ ದ್ವಿಗುಣಗೊಂಡಿದೆ. ಹಾಪ್ಕಾಮ್ಸ್ನಲ್ಲಿ ಹೋದ ವಾರ ₹40 ಇತ್ತು. ಸೋಮವಾರ ಇದು ₹80ಕ್ಕೆ ಏರಿದೆ. ಮೂಲಂಗಿ ಬೆಲೆಯಲ್ಲೂ ₹10 ಏರಿಕೆಯಾಗಿದೆ. ಕೆಜಿ ಬದನೆಕಾಯಿ ಕೂಡ ₹20ರಷ್ಟು ತುಟ್ಟಿಯಾಗಿದೆ. ಕಳೆದ ವಾರದವರೆಗೂ ₹40 ಇತ್ತು.
ಸಂಕ್ರಾಂತಿ ವೇಳೆಗೆ ಅವರೆಕಾಯಿ, ತೊಗರಿಕಾಯಿಗೂ ಬೇಡಿಕೆ ಹೆಚ್ಚಾಗಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ. ಹಾಪ್ಕಾಮ್ಸ್ನಲ್ಲಿ ಎರಡರ ಧಾರಣೆಯೂ ಕೆಜಿಗೆ ₹80 ಇದೆ. ಬೆಳ್ಳುಳ್ಳಿಯ ದುಬಾರಿ ಬೆಲೆ (₹240) ಈ ವಾರವೂ ಮುಂದುವರಿದಿದೆ.
ಟೊಮೆಟೊ, ಈರುಳ್ಳಿ ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಸೀಡ್ಲೆಸ್ ದ್ರಾಕ್ಷಿ ಲಗ್ಗೆ:
ಹಣ್ಣುಗಳ ಮಾರುಕಟ್ಟೆಗೆ ಸೀಡ್ಲೆಸ್ ದ್ರಾಕ್ಷಿ ಲಗ್ಗೆ ಇಟ್ಟಿದೆ. ಕೆಜಿಗೆ ₹80 ಇದೆ. ಕಪ್ಪು ದ್ರಾಕ್ಷಿಯೂ ಲಭ್ಯವಿದ್ದು, ಕೆಜಿಗೆ ₹160 ಇದೆ.
ಸೇಬು ಕೆಜಿಗೆ ₹130ರಿಂದ ₹140ರವರೆಗೆ ಇದೆ. ದಾಳಿಂಬೆ ₹120ಕ್ಕೆ ಸಿಗುತ್ತಿದೆ. ಮೂಸಂಬಿ, ಕಿತ್ತಳೆ, ಏಲಕ್ಕಿ ಬಾಳೆಹಣ್ಣಿನ ಬೆಲೆ ಸ್ಥಿರವಾಗಿದೆ.