ಮಹದೇಶ್ವರಬೆಟ್ಟ: ಬೆಟ್ಟ ವ್ಯಾಪ್ತಿಯ ಮೆಂದರೆ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಕಂದಾಯ, ಭೂಮಾಪನ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಕೈಗೊಂಡಿರುವ ಮೂರು ದಿನಗಳ ಸರ್ವೆ ಕಾರ್ಯ ಬುಧವಾರ ಮುಕ್ತಾಯಕಂಡಿದೆ.
ಮತದಾನದ ದಿನ ಇಂಡಿಗನತ್ತದಲ್ಲಿ ಘರ್ಷಣೆ ನಡೆದ ಬಳಿಕ ಮೆಂದರೆ ಗ್ರಾಮಸ್ಥರು ತಮಗೆ ಪುನರ್ವಸತಿ ಕಲ್ಪಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಗ್ರಾಮದ ಸರ್ವೆ ನಡೆಸಲು ಉಪವಿಭಾಗಾಧಿಕಾರಿಯವರಿಗೆ ಸೂಚನೆ ನೀಡಿದ್ದರು. .
ಮೂರು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರದಿಂದ ಗ್ರಾಮದಲ್ಲಿ ಸರ್ವೆ ನಡೆಸಿದ್ದರು. ಮನೆ ಮನೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಈ ಮಾಹಿತಿಯನ್ನು ತಹಶೀಲ್ದಾರ್ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.
‘ಸರ್ವೆ ಮುಕ್ತಾಯವಾಗಿದ್ದು ತಾಲ್ಲೂಕು ಆಡಳಿತ ವರದಿ ಸಿದ್ಧಪಡಿಸಿ ನನಗೆ ನೀಡಲಿದ್ದಾರೆ. ಆ ಬಳಿಕ ನಾನು ಜಿಲ್ಲಾಧಿಕಾರಿಯವರಗೆ ಸಲ್ಲಿಸಲಿದ್ದೇನೆ’ ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.