ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾನ ಬಹಿಷ್ಕಾರ ಎಚ್ಚರಿಕೆ; ಉಪವಾಸ ಸತ್ಯಾಗ್ರಹ

ಪುರಾಣಿಪೋಡು ಸೋಲಿಗರಿಂದ ಮೂಲ ಸೌಕರ್ಯಕ್ಕೆ ಆಗ್ರಹ
Published 5 ಏಪ್ರಿಲ್ 2024, 4:40 IST
Last Updated 5 ಏಪ್ರಿಲ್ 2024, 4:40 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿನ ನಿವಾಸಿಗಳು ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದು, ಗುರುವಾರ ಮುಂಜಾನೆಯಿಂದ  ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ.  ಮುಖ್ಯ ರಸ್ತೆಗೆ ತಲುಪಲು ಕಲ್ಲು ದಾರಿಯನ್ನು ಆಶ್ರಯಿಸಬೇಕು. ಕಾಡು ಪ್ರಾಣಿಗಳ ಭಯದಲ್ಲಿ ಸಂಚರಿಸಬೇಕು. ರಾತ್ರಿ ವಿದ್ಯತ್ ಸಮಸ್ಯೆಯಿಂದ ನಿವಾಸಿಗಳು ತೊಂದರೆಯಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ. 

ಮುತ್ತುಗದೆ ಗದ್ದೆ ಪೋಡಿನಲ್ಲಿ 130 ಕುಟುಂಬಗಳ 500ಕ್ಕೂ ಹೆಚ್ಚು ಜನರು ಇದ್ದಾರೆ. 319 ಮತದಾರರು ಇದ್ದಾರೆ. ಪೋಡಿನ ಸುತ್ತಮುತ್ತಲ ಎಂಟಟ್ಟಿ ಸಾಲು, ಸಾಗಡೆಗುಡ್ಡೆ, ಭದ್ರನಗುಡ್ಡೆ, ಸಿದ್ದನಗುಡ್ಡೆ, ಗುಡ್ಡೆಯೂರು, ತಿನಯನ ಗೆಜ್ಜೆಗಾಡಿ ಪೋಡಿನ ನೂರಾರು ಜನರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

‘ಪ್ರತಿ ಚುನಾವಣೆ ಸಮಯದಲ್ಲಿ ಜನ ಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುತ್ತಾರೆ. ನಂತರ ಗ್ರಾಮದ ಅಭಿವೃದ್ಧಿ ಮರೆಯುತ್ತಾರೆ. ಮಕ್ಕಳು ಮತ್ತು ಮಹಿಳೆಯರು ಶಾಲೆ ಸೇರಿದಂತೆ ಬೇರೆ ಸ್ಥಳಗಳಿಗೆ ತೆರಳಲೂ ಪರದಾಡುತ್ತಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪೋಡು ಇದೆ ಎಂಬ ನೆಪದಿಂದ ಕನಿಷ್ಠ ಮೂಲ ಸೌಕರ್ಯ ನೀಡುವಲ್ಲಿ ಆಡಳಿತ ವಿಫಲವಾಗಿದೆ. ಹಾಗಾಗಿ, ಈ ಸಲ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು’ ಎಂದು ಚಲುವಾದಿ ಜೋಗಿಗೌಡ ಹೇಳಿದರು.

ತಮ್ಮಡಿ ಮುತ್ತೇಗೌಡ, ಭೂಮಿ ಸಿದ್ದೆಗೌಡ, ರಂಗಸ್ವಾಮಿ ನಾಗರಾಜು, ನಂಜೇಗೌಡ, ಬೊಮ್ಮಮ್ಮ, ಮಹದೇವಮ್ಮ ಹಾಗೂ ಇತರರು ಭಾಗವಹಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT