ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಮಾರುಕಟ್ಟೆಗೆ ಅವರೆಕಾಯಿ ಲಗ್ಗೆ

ಅಕ್ಕಡಿ ಬೆಳೆಯಾಗಿ ಅವರೆ ಜನಪ್ರಿಯ
Published 11 ಜನವರಿ 2024, 7:15 IST
Last Updated 11 ಜನವರಿ 2024, 7:15 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗದಿದ್ದರೂ ಪ್ರಸಕ್ತ ಋತುವಿನಲ್ಲಿ ಅವರೆಕಾಯಿ ಘಮಲು ಬಡಿಯುತ್ತಿದೆ. ಅವರೆಕಾಯಿಗೆ ಉತ್ತಮ ಬೆಲೆ ಸಿಗುತ್ತಿದ್ದು ರೈತರ ಮುಖದಲ್ಲಿ ಕೊಂಚ ಮಂದಹಾಸ ಮಿನುಗುತ್ತಿದೆ.

ಈ ಸಮಯದಲ್ಲಿ ಸಾಮಾನ್ಯವಾಗಿ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜನರು ಕೂಡಾ ಅವರೆಕಾಯಿಗಾಗಿಯೇ ಕಾಯುತ್ತಿರುತ್ತಾರೆ. ಅವರೆಕಾಳು ಹುಳಿ, ಕಾಳು ಗೊಜ್ಜು, ಇದುಕಿನ ಬೇಳೆ ಸಾರು ಎಂದರೆ ಬಾಯಲ್ಲಿ ನೀರೂರುತ್ತವೆ. 

ಭೂಮಿಯಲ್ಲಿ ತೇವಾಂಶ ಕಡಿಮೆ ಇರುವ ಕಾರಣದಿಂದ ಅವರೆಕಾಯಿ ಇಳುವರಿ ಕುಸಿದಿದೆ. ಮಳೆಯಂತೆ ಬೀಳುತ್ತಿರುವ ಇಬ್ಬನಿ ಅವರೆ ಗಿಡಗಳಿಗೆ ವರದಾನವಾಗಿದ್ದು ಅಲ್ಪಸ್ವಲ್ಪ ಕಾಯಿ ಬರುತ್ತಿದೆ. ಪೇಟೆಯಲ್ಲಿ ಕಳೆದ ವರ್ಷ ಆರಂಭದಲ್ಲಿ ₹ 40- ₹50 ಆಸುಪಾಸಿನಲ್ಲಿದ್ದ ಕೆ.ಜಿ.ಅವರೆಕಾಯಿ ದರ ₹ 25 ರಿಂದ ₹20ರ ತನಕ ಇಳಿಕೆಯಾಗಿತ್ತು. ಆದರೆ, ಈ ವರ್ಷ ₹ 35- ₹ 40ಗಳಿಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಗೃಹಿಣಿಯರು.

ನಗರದ ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಅವರೆಕಾಯಿ ಜತೆಗೆ ಆಂಧ್ರಪ್ರದೇಶದಿಂದ ಹೆಚ್ಚಿನ ಅವರೆಕಾಯಿ ಮಾರಾಟಕ್ಕೆ ಬರುತ್ತದೆ. ಬೆಳಗಿನ ಜಾವ ಮತ್ತು ಮಧ್ಯಾಹ್ನ ಎರಡು ಹರಾಜು ನಡೆಯುತ್ತದೆ. ಇಲ್ಲಿಂದ ಬೆಂಗಳೂರಿಗೆ ರವಾನೆಯಾಗುತ್ತದೆ.

ತಾಲ್ಲೂಕಿನಲ್ಲಿ ಅವರೆಕಾಯಿ ಬೆಳೆಯನ್ನು ಪ್ರತ್ಯೇಕವಾಗಿ ಬೆಳೆಯದೆ ರಾಗಿ ಮತ್ತು ನೆಲಗಡಲೆಯೊಡನೆ ಅಕ್ಕಡಿ (ಉಪಬೆಳೆ) ಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ರೈತರು ಮೊದಲು ಅವರೆ ಬೆಳೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿರಲಿಲ್ಲವಾದರೂ ಇತ್ತೀಚೆಗೆ ವಾಣಿಜ್ಯ ಬೆಳೆಗೆ ನೀಡುವ ಪ್ರಾಮುಖ್ಯತೆ ಕೊಟ್ಟಿದ್ದಾರೆ.

ನೆಲಗಡಲೆ ಬೆಳೆಯಲ್ಲಿ 4-5 ಸಾಲುಗಳ ನಡುವೆ ಅವರೆ ಗಿಡಗಳನ್ನು ಹಾಕಲಾಗುತ್ತಿದ್ದು, ಇದರಿಂದ ನೆಲಗಡೆಲೆಗೆ ಕೀಟಗಳ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ರಾಗಿ ಬೆಳೆಯಲ್ಲೂ ಇದೇ ರೀತಿ ಅವರೆ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಸಲಾಗುತ್ತದೆ. ರಾಗಿ ಕೊಯ್ಲಿನ ನಂತರ ಅವರೆಗೆ ಅವಕಾಶವಾಗಿ ಹುಲುಸಾಗಿ ಬೆಳೆಯುತ್ತದೆ.

ತಾಲ್ಲೂಕಿನ ಕೈವಾರ, ಕಸಬಾ, ಅಂಬಾಜಿ ದುರ್ಗ, ಮುರುಗಮಲ್ಲ ಹೋಬಳಿಗಳಲ್ಲಿ ರಾಗಿಯ ಬೆಳೆಯ ನಡುವೆ ಹಾಗೂ ಮುಂಗಾನಹಳ್ಳಿ, ಕೆಂಚಾರ್ಲಹಳ್ಳಿ ಹೋಬಳಿಗಳಲ್ಲಿ ನೆಲಗಡಲೆಯ ನಡುವೆ ಅವರೆ ಬೆಳೆಯನ್ನು ಬೆಳೆಯುತ್ತಾರೆ. ಇತ್ತೀಚೆಗೆ ಕೆಲವು ಕಡೆ ನೀರಾವರಿ ಬೆಳೆಯಾಗಿಯೂ ಅವರೆಯನ್ನು ಬೆಳೆಯುವ ಪದ್ಧತಿ ಆರಂಭವಾಗಿದೆ.

ಉತ್ತಮ ಬೆಳೆ, ಅಧಿಕ ಇಳುವರಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಬೆಲೆ ಅಧಿಕವಾಗಿದ್ದರೂ ರೈತರಿಗೆ ಹೆಚ್ಚಿನ ಲಾಭ ಸಿಗದೆ ಮದ್ಯವರ್ತಿಗಳ ಪಾಲಾಗುತ್ತಿದೆ. ಗ್ರಾಹಕರಿಗೂ ಬೆಲೆ ಎಟುಕದಂತಾಗಿದೆ. ಆನೆ ಸತ್ತರೂ ಸಾವಿರ ಬದುಕಿದರೂ ಸಾವಿನ ಎಂಬ ನಾಳ್ನನುಡಿಯಂತೆ ಬೆಳೆ ಅಧಿಕವಾಲಿ, ಕೊರತೆಯಾಗಲಿ ಮದ್ಯವರ್ತಿಗಳಿಗೆ ಮಾತ್ರ ಯಾವ ತೊಂದರೆಯೂ ಇಲ್ಲದೆ ಲಾಭ ಮಾಡಿಕೊಳ್ಳುತ್ತಾರೆ ಎಂದು ರೈತರು ಆರೋಪಿಸುತ್ತಾರೆ.

ಹೊಲಗಳಲ್ಲಿ ಕಾಯಿ ಕೀಳುವ ಕೂಲಿ, ಮಾರುಕಟ್ಟೆಗೆ ಸಾಗಿಸುವ ವೆಚ್ಚ, ಮಾರುಕಟ್ಟೆ ಕಮೀಷನ್ ಮುಂತಾದ ಖಚ್ಚರ್ುಗಳನ್ನೆಲ್ಲ ಕಳೆದರೆ ರೈತರಿಗೆ ಸಿಗುವುದು ಅತ್ಯಲ್ಪವೇ. ವ್ಯಾಪಾರಿಗಳು ಮಾತ್ರ ಒಂದೆರಡು ದಿನಗಳಲ್ಲಿ ರೈತರಿಗಿಂತ ಹೆಚ್ಚಿನ ಹಣವನ್ನು ಸಂಪಾದಿಸುತ್ತಾರೆ. ಗ್ರಾಹಕರು ಹೆಚ್ಚಿನ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳಬೇಕಾಗಿದೆ ಎಂದು ಗ್ರಾಹಕರು ದೂರುತ್ತಾರೆ.

ಅವರೆಕಾಯಿಯನ್ನು ಕೀಳದೆ ಗಿಡಗಳಲ್ಲೇ ಒಣಗಿಸಿ ಅವರೆಕಾಳನ್ನು ಮಾಡುತ್ತಾರೆ. ಒಣಗಿದ ಕಾಳನ್ನು ಬೇಳೆ ಮಾಡಿಸಿ ಮಾರಿದರೆ ಉತ್ತಮ ಲಾಭ ಸಿಗುತ್ತದೆ. ಬೇಳೆಯನ್ನು ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಹಸಿ ಕಾಯಿಯನ್ನೇ ಮಾರಿ ಬಿಡುತ್ತಾರೆ. ಒಳ್ಳೆಯ ಲಾಭದ ಆಸೆಯಿಂದ ಒಣಗಿಸಿ ಬೇಳೆ ಮಾಡಲು ಹೊರಟರೆ ಪರಿಣಾಮಕಾರಿಯಾದ ತಂತ್ರಜ್ಞಾನವಿಲ್ಲದ ಕಾರಣ ಕಾಳಿಗೆ ಹುಳುಬಿದ್ದು ಹಾಳಾಗುತ್ತದೆ ಎಂದು ರೈತ ಮುನಿರಾಮಪ್ಪ ಹೇಳುತ್ತಾನೆ.

ಅವರೆಕಾಯಿಗೆ ದಳ್ಳಾಳಿಗಳಿಲ್ಲದ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಒದಗಸಿಕೊಡಬೇಕು. ಮದ್ಯವರ್ತಿಗಳಿಗೆ ಕಡಿವಾಣ ಹಾಕಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತಹ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಬೇಕೆಂದು ರೈತರ ಒಕ್ಕೂರಲಿನ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT