ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಆಯುಕ್ತರ ವರ್ಗಾವಣೆ ಪ್ರಕರಣ ಶುಕ್ರವಾರ ಹೊಸ ತಿರುವು ಪಡೆದುಕೊಂಡಿದ್ದು, ನಗರಸಭೆಯ ಹಾಲಿ ಆಯುಕ್ತ ಕೆ.ಎಲ್.ಬಸವರಾಜ್ ಅವರೇ ಆಯುಕ್ತರಾಗಿ ಮುಂದುವರೆಯಲಿದ್ದಾರೆ.
ನಗರಸಭೆಯಲ್ಲಿ ಗುರುವಾರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ಆಯುಕ್ತ ಬಿ.ಡಿ.ಬಸವ ರಾಜಪ್ಪ ಅವರು ವರ್ಗಾವಣೆ ಆದೇಶ ಪತ್ರ ತೋರಿಸಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದಾರು. ಇದರಿಂದ ಕೆ.ಎಲ್.ಬಸವರಾಜ್ ಮತ್ತು ನಗರಸಭೆ ಅಧ್ಯಕ್ಷ ಬಿ.ಎ.ಲೋಕೇಶ್ಕುಮಾರ್ ಅವರು ಅಚ್ಚರಿ ಒಳಗಾಗಿದ್ದರು.
ತಮ್ಮ ವರ್ಗಾವಣೆ ಯಾಗದಂತೆ ಕರ್ನಾಟಕ ನ್ಯಾಯ ಮಂಡಳಿಯು ಏಪ್ರಿಲ್ವರೆಗೆ ತಡೆಯಾಜ್ಞೆ ತಂದಿದೆ. ತಮ್ಮ ಸ್ಥಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ್ ಸ್ಪಷ್ಟವಾಗಿ ಹೇಳಿದ್ದರು.
`ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚರ್ಚೆನಡೆಸಲಾಯಿತು. ಕೆ.ಎಲ್.ಬಸವರಾಜ್ ಅವರನ್ನು ಯಥಾರೀತಿ ಆಯುಕ್ತರಾಗಿ ಮುಂದುವರೆಯುವಂತೆ ಸೂಚಿಸಲಾಯಿತು. ಬೆಂಗಳೂರಿನ ನಗರಾಭಿವೃದ್ಧಿಗೆ ಇಲಾಖೆಗೆ ಭೇಟಿ ನೀಡುವಂತೆ ಬಿ.ಡಿ.ಬಸವರಾಜಪ್ಪ ಅವರಿಗೆ ಹೇಳಲಾಯಿತು~ ಎಂದು ನಗರಸಭೆ ಅಧ್ಯಕ್ಷ ಬಿ.ಎ.ಲೋಕೇಶ್ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.