ಚಿಕ್ಕಬಳ್ಳಾಪುರದ 9ನೇ ವಾರ್ಡ್ನಲ್ಲಿ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದ ಎದುರಿನಲ್ಲಿರುವ ಚರಂಡಿ ಕಳೆದ ಹಲವು ತಿಂಗಳಿನಿಂದ ಮಡುಗಟ್ಟಿ ನಿಂತು, ಸೊಳ್ಳೆಗಳ ಆವಾಸ ತಾಣವಾಗಿದೆ.
ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಚರಂಡಿ ತುಂಬಿಕೊಂಡು ಗಬ್ಬು ವಾಸನೆ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. ನಗರಸಭೆ ಅಧಿಕಾರಿಗಳು ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇನ್ನಾದರೂ ಅವರು ಇತ್ತ ಗಮನ ಹರಿಸಿ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಲಿ.
ವೆಂಕಟೇಶ್, 9ನೇ ವಾರ್ಡ್ ನಿವಾಸಿ ಸಕಾಲಕ್ಕೆ ಕಸ ತೆಗೆಸಿ ಚಿಕ್ಕಬಳ್ಳಾಪುರದ ದರ್ಗಾ ಮೊಹಲ್ಲಾ ಪ್ರದೇಶದಲ್ಲಿ ದರ್ಗಾ ಹಿಂಭಾಗದಲ್ಲಿ ಸ್ಥಳೀಯರು ರಸ್ತೆಯಲ್ಲಿಯೇ ಸುರಿದು ಹೋಗುವ ತ್ಯಾಜ್ಯವನ್ನು ನಗರಸಭೆ ಸಕಾಲಕ್ಕೆ ವಿಲೇವಾರಿ ಮಾಡಿಸದಿದ್ದರೆ ಇಲ್ಲಿನ ಪರಿಸ್ಥಿತಿ ಅಧ್ವಾನಗೊಂಡು ಹೋಗುತ್ತದೆ.
ಆಹಾರ ಅರಸಿ ಸುತ್ತಾಡುವ ಬೀದಿ ನಾಯಿಗಳು, ಹಸುಗಳು, ಮೇಕೆಗಳು ಇಲ್ಲಿ ಬಂದು ತ್ಯಾಜ್ಯದ ರಾಶಿಯನ್ನು ಕೆದಕಿ ರಸ್ತೆಗೆ ಮತ್ತು ಚರಂಡಿಯ ತುಂಬೆಲ್ಲ ಹರಡುತ್ತವೆ. ಮಳೆ ಸುರಿದರಂತೂ ಇಲ್ಲಿನ ಗಲೀಜಿನ ಚಿತ್ರಣ ಬಣ್ಣಿಸಲಾಗದಷ್ಟು ಕೆಟ್ಟು ಹೋಗುತ್ತದೆ. ಇಲ್ಲಿನ ಜನರಿಗೆ ಸದಾ ಕಾಲ ಸಾಂಕ್ರಾಮಿಕ ರೋಗಗಳದೇ ಭೀತಿ.
ಇಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕುವ ಜತೆಗೆ ಚರಂಡಿ ಹೂಳು ತೆಗೆಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಾಗಿದೆ. ನಗರಸಭೆಯವರಿಗೆ ಹೇಳಿ ಹೇಳಿ ಸಾಕಾಗಿದೆ. ಇನ್ನಾದರೂ ಇತ್ತ ತಿರುಗಿ ನೋಡುವರೆ? ಮಹಮ್ಮದ್, ಸ್ಥಳೀಯ ನಿವಾಸಿ