ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ಗೆದ್ದ ಅಮೃತಮಹಲ್‌ ಕಾವಲ್

ಕೊಳವೆಬಾವಿಯಲ್ಲಿ ಭರಪೂರ ನೀರು, ಸಮೃದ್ಧ ಹಸಿರು ಮೇವು
Published 3 ಮೇ 2024, 6:18 IST
Last Updated 3 ಮೇ 2024, 6:18 IST
ಅಕ್ಷರ ಗಾತ್ರ

ಬೀರೂರು: ಅಮೃತಮಹಲ್‌ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುತ್ತಿರುವ ಬಾಸೂರು ಅಮೃತಮಹಲ್‌ ಕಾವಲು ಹಲವು ಕೊರತೆಗಳ ನಡುವೆಯೂ ಬರಗಾಲವನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಸೂರು ಗ್ರಾಮದಲ್ಲಿರುವ ಈ ಅಮೃತಮಹಲ್‌ ಅಪ್ಪಟ ಹುಲ್ಲುಗಾವಲಾಗಿದ್ದು, ಒಟ್ಟು 1,719.10 ಎಕರೆ ವಿಸ್ತೀರ್ಣ ಹೊಂದಿದೆ.

ಈ ಹಿಂದೆ 250ಕ್ಕೂ ಹೆಚ್ಚು ರಾಸುಗಳ ನಿರ್ವಹಣೆ ಹಾಗೂ ತಳಿ ಸಂವರ್ಧನೆ ನಡೆಯುತ್ತಿತ್ತು. ಕಾರಣಾಂತರ ಗಳಿಂದ ಸದ್ಯ ಇಲ್ಲಿ 120 ರಾಸುಗಳಿವೆ. ಅದರಲ್ಲಿ 103 ಹೆಣ್ಣು ಕರುಗಳು ಮತ್ತು ಹಸುಗಳಿದ್ದು, 17 ಬೀಜದ ಹೋರಿಗಳಿವೆ. ಇವುಗಳ ಸಂತತಿಯಲ್ಲಿ ಗಂಡು ಕರುಗಳನ್ನು ಪ್ರತಿವರ್ಷ ಹರಾಜು ಮಾಡಲಾಗುತ್ತಿದ್ದು ಸರ್ಕಾರಕ್ಕೆ ಆದಾಯವೂ ಇದೆ. ಮೇವಿನ ಕೊರತೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತಲಾ 20 ಎಕರೆಯ 2 ಪ್ಲಾಟ್‌ ಅನ್ನು ಬೇಲಿ ಹಾಕಿ, ಮೇವು ಬೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ನಿರಂತರ ಅನುದಾನದ ಹರಿವು ಇಲ್ಲದ ಕಾರಣ ಪ್ರತಿ ತಿಂಗಳು 2 ಅಥವಾ 3 ಎಕರೆಯಲ್ಲಿ ಹಿಂಗಾರುಜೋಳ, ಮೆಕ್ಕೆಜೋಳ ಬಿತ್ತನೆ ಮಾಡಿ ರಾಸುಗಳಿಗೆ ಹಸಿರು ಮೇವು ಪೂರೈಸಲಾಗುತ್ತಿದೆ.

ಕಡೂರು ತಾಲ್ಲೂಕು ಬರಪೀಡಿತ ಪ್ರದೇಶವಾಗಿ ಘೋಷಿತವಾಗಿದ್ದರೂ, ಪಕ್ಕದ ಕಾವಲಿನಲ್ಲಿ ನೀರು ಮೇವಿಗೆ ಕೊರತೆ ಕಂಡುಬಂದಿದ್ದರೂ ಇಲ್ಲಿ ಅಂತಹ ಸಮಸ್ಯೆ ಏನೂ ಕಂಡು ಬಂದಿಲ್ಲ. ತುರ್ತು ಸಂದರ್ಭಕ್ಕೆ ಇರಲಿ ಎಂದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ 5 ಎಕರೆ ಭೂಮಿಯಲ್ಲಿ ಹಸಿರು ಮೇವು ಬೆಳೆಯಲಾಗಿದೆ. ಸದ್ಯ ಸುಮಾರು 110 ಟನ್‌ ಹಸಿಮೇವು ಲಭ್ಯವಿದ್ದು, 50 ಟನ್‌ ಒಣಮೇವು ಸಂಗ್ರಹಿಸಲಾಗಿದೆ. ಇರುವ ಮೂರು ಕೊಳವೆಬಾವಿಗಳು ಸಮೃದ್ಧ ನೀರು ಹೊಂದಿವೆ. ಮಳೆ ಕೊರತೆ ಕಾರಣದಿಂದ ಕಾವಲಿನಲ್ಲಿ ನೈಸರ್ಗಿಕ ಹುಲ್ಲು ಕಡಿಮೆಯಾಗಿದ್ದು, ಚಿರತೆಗಳಿಂದ ಸಂರಕ್ಷಿಸುವ ಸಲುವಾಗಿ ರಾಸುಗಳನ್ನು ನಿಗದಿತ ಪ್ರದೇಶದಲ್ಲಿ ಓಡಾಡಿಸಿ ಶೆಡ್‌ ಬಳಿ ತಂದು ಮೇವು, ನೀರು ಪೂರೈಸಲಾಗುತ್ತಿದೆ. ಕಾವಲಿನ ವ್ಯಾಪ್ತಿಯಲ್ಲಿರುವ ಕೆರೆಯಲ್ಲಿಯೂ ಸ್ವಲ್ಪಮಟ್ಟಿನ ನೀರಿನ ಸಂಗ್ರಹವಿದೆ, ಇದು ಸಂರಕ್ಷಿತ ಪ್ರದೇಶದ ಇತರ ವನ್ಯಜೀವಿಗಳ ನೀರಿನ ಆಶ್ರಯವಾಗಿದೆ.

ಲಭ್ಯ ಸಂಪನ್ಮೂಲ ಬಳಸಿಕೊಂಡು ಅಮೃತಮಹಲ್‌ ಕಾವಲಿನ ಸಂರಕ್ಷಣೆ ನಡೆದಿದೆ. ಜಾನುವಾರುಗಳ ನೀರಿನ ದಾಹ ತಣಿಸಲು ಕೊಳವೆ ಬಾವಿ ಸದ್ಯದ ಆಸರೆ ಆಗಿದ್ದು, ವಿದ್ಯುತ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಮೇವು ಬೆಳೆಯುವ ಪ್ರದೇಶಕ್ಕೆ ಹಂದಿಗಳ ಕಾಟ ವಿಪರೀತವಾಗಿದ್ದು ಐಬೆಕ್ಸ್‌ ಬೇಲಿ ಅಳವಡಿಸಿದರೂ ವಿದ್ಯುತ್‌ ಪೂರೈಕೆ ಕೊರತೆಯಿಂದ ಉದ್ದೇಶಕ್ಕೆ ಅಡ್ಡಿಯಾಗುತ್ತಿದೆ. ನಿರಂತರ ಜ್ಯೋತಿ ಮೂಲಕ ವಿದ್ಯುತ್‌ ಪೂರೈಕೆ ಆಗಬೇಕು ಎಂಬುದು ಸ್ಥಳೀಯರ ಆಗ್ರಹ.

ಬಾಸೂರು ಅಮೃತಮಹಲ್‌ ಕಾವಲು ಜಿಲ್ಲೆಯ ಅಪ್ಪಟ ಹುಲ್ಲುಗಾವಲಾಗಿದ್ದು, ಪರಿಸರ ರಕ್ಷಣೆ ಮತ್ತು ಸಮತೋಲನಕ್ಕಾ ಇದರ ಸಂರಕ್ಷಣೆ ಮುಖ್ಯವಾಗಿದೆ. ಇಲ್ಲಿ ಅಭಿವೃದ್ಧಿ ನೆಪದಲ್ಲಿ ಕಾವಲಿನ ವಿಭಜನೆಯ ಕೃತ್ಯ ಸಾಧುವಲ್ಲ. ಯಾರೂ ಹಸ್ತಕ್ಷೇಪ ಮಾಡದೆ ಇರುವ ಹಾಗೆ ಇಟ್ಟರೆ ಒಳ್ಳೆಯದು ಎನ್ನುತ್ತಾರೆ ವನ್ಯಜೀವಿ ಸಂರಕ್ಷಣೆ ಹೋರಾಟಗಾರ ಸ.ಗಿರಿಜಾಶಂಕರ.

ಬಾಸೂರು ಕಾವಲಿನಲ್ಲಿ ಜಾನುವಾರುಗಳಿಗೆ ನೀರು ಪೂರೈಸುವ ತೊಟ್ಟಿ
ಬಾಸೂರು ಕಾವಲಿನಲ್ಲಿ ಜಾನುವಾರುಗಳಿಗೆ ನೀರು ಪೂರೈಸುವ ತೊಟ್ಟಿ
ಬಾಸೂರು ಕಾವಲಿನಲ್ಲಿ ಜಾನುವಾರುಗಳಿಗೆ ಹಿಂಗಾರು ಜೋಳ ಬೆಳೆದಿರುವುದು
ಬಾಸೂರು ಕಾವಲಿನಲ್ಲಿ ಜಾನುವಾರುಗಳಿಗೆ ಹಿಂಗಾರು ಜೋಳ ಬೆಳೆದಿರುವುದು
ಅಮೃತಮಹಲ್‌ ಕಾವಲಿನಲ್ಲಿ ಸದ್ಯ ಸಂಗ್ರಹಿಸಲಾಗಿರುವ ಒಣ ಮೇವು
ಅಮೃತಮಹಲ್‌ ಕಾವಲಿನಲ್ಲಿ ಸದ್ಯ ಸಂಗ್ರಹಿಸಲಾಗಿರುವ ಒಣ ಮೇವು

ಪೂರಕ ವಾತಾವರಣ ಆದ್ಯತೆ’

ಪಶು ಪಕ್ಷಿ ಜಾನುವಾರುಗಳು ತಮ್ಮ ನೋವು ಸಂಕಟ ಹೇಳಿಕೊಳ್ಳಲಾರವು ಸೂಕ್ಷ್ಮ ಸಂವೇದನೆಯ ಮೂಲಕ ಅವುಗಳ ನಡೆ-ನುಡಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ನಾವು ನಡೆಯಬೇಕು. ಬಾಸೂರು ಅಮೃತಮಹಲ್‌ ಕಾವಲಿನಲ್ಲಿ ರಾಸುಗಳ ಸಂರಕ್ಷಣೆ ಸಂವರ್ಧನೆ ಜತೆಗೆ ಅವುಗಳಿಗೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎನ್ನುತ್ತಾರೆ ಬಾಸೂರು ಅಮೃತಮಹಲ್‌ ಕಾವಲು ಪಶುವೈದ್ಯಾಧಿಕಾರಿ ಡಾ.ಕೆ.ಟಿ.ನವೀನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT