ಚಿಕ್ಕಮಗಳೂರು: ಮನೆ–ಮನೆಗೆ ನಳ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ನಡೆಯುತ್ತಿದ್ದು, ಕಾಮಗಾರಿಗಳ ಸ್ಥಿತಿ ನೋಡಿದರೆ ಅಂದುಕೊಂಡಂತೆ 2024ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆ.
ಜಿಲ್ಲೆಯಲ್ಲಿ ಒಟ್ಟು 1013 ಗ್ರಾಮಗಳಿದ್ದು, ಮನೆಗಳು ಚದುರಿದಂತೆ ಇರುವುದರಿಂದ 3,719 ಜನವಸತಿ ಎಂದು ಗುರುತಿಸಲಾಗಿದೆ. ಒಟ್ಟು 2,41,262 ಮನೆಗಳಿದ್ದು, ಪ್ರತಿ ಮನೆಗೆ ನಳ ಸಂಪರ್ಕದ ಮೂಲಕ 55 ಲೀಟರ್ ನೀರು ಪೂರೈಸುವ ಉದ್ದೇಶವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊಂದಿದೆ.
ನದಿಗಳಿಂದ ನೀರು ತಂದು ಪೂರೈಸಲು ಸಾಧ್ಯವಿರುವ ಕಡೆಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಸಾಧ್ಯತೆ ಇಲ್ಲದ ಕಡೆಗಳಲ್ಲಿ ಝರಿಗಳು ಸೇರಿ ಬೇರೆ ಜಲ ಮೂಲಗಳಿಂದ ನೀರು ಸಂಗ್ರಹಿಸಿ ಮನೆ–ಮನೆಗೆ ಸರಬರಾಜು ಮಾಡುವ ಯೋಜನೆಯನ್ನೂ ಅಧಿಕಾರಿಗಳು ರೂಪಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹1,265 ಕೋಟಿ ಖರ್ಚಾಗುವ ಅಂದಾಜಿದ್ದು, ಅದಲ್ಲದೇ ಮನೆ–ಮನೆಗೆ ನೀರು ಪೂರೈಸಲು ಆರಂಭಿಸಿರುವ ನಾಲ್ಕು ಪ್ಯಾಕೇಜ್ ಕಾಮಗಾರಿಗೆ ₹964 ಕೋಟಿ ವೆಚ್ಚವಾಗುವ ಅಂದಾಜಿದೆ.
ಮನೆ ಮನೆಗೆ ಗಂಗೆ ಯೋಜನೆಯಲ್ಲಿ ನಾಲ್ಕು ಬ್ಯಾಚ್ಗಳಲ್ಲಿ ಒಟ್ಟು 1,776 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಾಲ್ಕನೇ ಬ್ಯಾಚ್ ಕಾಮಗಾರಿ ಆರಂಭವಾಗಿದೆ. ಆದರೆ, ಕೆಲವೆಡೆ ಮೊದಲ ಬ್ಯಾಚ್ ಕಾಮಗಾರಿಗಳು ಪೂರ್ಣಗೊಂಡಿಲ್ಲ.
ಅಧಿಕಾರಿಗಳು ನೀಡುವ ಅಂಕಿ–ಅಂಶದ ಪ್ರಕಾರ ಇನ್ನೂ 94,003 ಮನೆಗಳಿಗೆ ನಳ ನೀರು ಸಂಪರ್ಕ ದೊರಕಿಲ್ಲ. ಈ ಕಾಮಗಾರಿ ಬಹುತೇಕ 2024ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.