ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪ: ‘ಕೂಸಿನ ಮನೆ’ ಯೋಜನೆ ಮಲೆನಾಡಿಗೆ ಸೂಕ್ತವಲ್ಲ; ವಿರೋಧ

Published 13 ಫೆಬ್ರುವರಿ 2024, 13:28 IST
Last Updated 13 ಫೆಬ್ರುವರಿ 2024, 13:28 IST
ಅಕ್ಷರ ಗಾತ್ರ

ಕೊಪ್ಪ: 'ಮಲೆನಾಡಿನ ಭಾಗದಲ್ಲಿ ಅನುಷ್ಠಾನ ಮಾಡಲು ಹೊರಟಿರುವ ಕೂಸಿನ ಮನೆ ಯೋಜನೆಯು ಅವೈಜ್ಞಾನಿಕವಾಗಿದೆ' ಎಂದು ರೈತ ಮುಖಂಡ, ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕರುವಾನೆ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೂಸಿನ ಮನೆ ಅನುಷ್ಠಾನಕ್ಕಾಗಿ ಮೇಲಧಿಕಾರಿಗಳು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಒತ್ತಡ ಹಾಕುತ್ತಿದ್ದಾರೆ. ಮೂರು ವರ್ಷದೊಳಗಿನ ಮಕ್ಕಳನ್ನು ಸಾಧಾರಣವಾಗಿ ತಾಯಂದಿರು ತಾವೇ ಲಾಲನೆ ಪಾಲನೆ ಮಾಡುತ್ತಾರೆ. ಬಲವಂತವಾಗಿ ಮಕ್ಕಳನ್ನು ಕೂಸಿನ ಮನೆಯಲ್ಲಿ ನೋಡಿಕೊಳ್ಳುವುದು ಸರಿಯಲ್ಲ' ಎಂದರು.

'ಹಾಲು ಕುಡಿಯುವ ಮಕ್ಕಳಿಗೆ ರಾಗಿ ಮಾಲ್ಟ್ ನೀಡಿದರೆ, ಅದು ಹೊಂದಿಕೆಯಾಗುವುದಿಲ್ಲ. ಆಹಾರದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾದರೆ, ಆ ಹೊಣೆಯನ್ನು ಯಾರು ಹೊರುತ್ತಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಲೇ ಮಾಡಲು ಸಾಕಷ್ಟು ಕೆಲಸಗಳಿವೆ. ಈ ನಡುವೆ ಮತ್ತಷ್ಟು ಒತ್ತಡ ಹೇರುವುದು ಸರಿಯಲ್ಲ' ಎಂದರು.

‘ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಇನ್ನೂ ಬಾಕಿ ಇದೆ. ಮೊದಲು ಆ ಕೆಲಸವಾಗಲಿ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಒತ್ತಡ ಕಡಿಮೆ ಮಾಡುವ ಬದಲು ಅವರ ಮೇಲೆ ಇನ್ನಷ್ಟು ಒತ್ತಡ ಹೇರಿದಂತಾಗುತ್ತದೆ. ಎಲ್ಲಾ ಯೋಜನೆಗಳನ್ನು ಬಯಲು ಸೀಮೆಯಂತೆಯೇ ಮಲೆನಾಡಿಗೂ ಅನ್ವಯ ಮಾಡುವುದು ಸರಿಯಾದ ಕ್ರಮವಲ್ಲ' ಎಂದು ಅವರು ಹೇಳಿದರು.

ಹರಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT