ಅಜ್ಜಂಪುರ: ಪಟ್ಟಣದ ಬೀರೂರು ರಸ್ತೆಯಲ್ಲಿ ಮುಸ್ಲಿಮರು ಶುಕ್ರವಾರ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಮಸೀದಿಯಲ್ಲಿ ಕಳೆದ ಎರಡು ದಿನ ಮಳೆಗಾಗಿ ಪ್ರಾರ್ಥನೆ ನಡೆಸಿದ್ದರು. ಶುಕ್ರವಾರ ಮಕ್ಕಳು ಹಾಗೂ ನೂರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
‘ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ಮಳೆ ಇಲ್ಲದೇ ಬೆಳೆ ಬತ್ತುತ್ತಿವೆ, ತೋಟಗಳು ಒಣಗುತ್ತಿವೆ. ಜಾನುವಾರುಗಳು ಮೇವಿಲ್ಲದೇ, ನೀರಿಲ್ಲದೇ ಸಂಕಷ್ಟದಲ್ಲಿವೆ. ಕಷ್ಟದಲ್ಲಿರುವ ಜನರ ಜೀವನ ನಿರ್ವಹಣೆಗೆ ಮಳೆಯೊಂದೇ ಪರಿಹಾರ.
ಹಾಗಾಗಿ, ಮಳೆ ನೀಡುವಂತೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ’ ಎಂದು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಮಸೂದ್ ಅಹಮದ್ ತಿಳಿಸಿದರು. ಕಾಂಗ್ರೆಸ್ ಮುಖಂಡ ಜಿ.ನಟರಾಜ್, ಜೆಡಿಎಸ್ ಮುಖಂಡ ಶಿವಾನಂದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಪಾಲ್ಗೊಂಡಿದ್ದರು.