ಹೊಳಲ್ಕೆರೆ: ಪಟ್ಟಣದ ಗಣಪತಿ ದೇವಾಲಯದ ಹಿಂಭಾಗದಲ್ಲಿರುವ ಚೀರನಹಳ್ಳಿ ರಸ್ತೆಯ ಪಕ್ಕದಲ್ಲಿರುವ ನೂರಾರು ಎಕರೆ ಅಡಿಕೆ ತೋಟಗಳಿಗೆ ಪಟ್ಟಣದ ಚರಂಡಿ ನೀರು ನುಗ್ಗಿದ್ದು, ಅಡಿಕೆ ಮರಗಳು ನಾಶವಾಗುವಆತಂಕ ಎದುರಾಗಿದೆ.
‘ಹಳ್ಳದ ವೀರಭದ್ರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ಪಟ್ಟಣದ ಚರಂಡಿ ನೀರು, ಹೊಂಡದ ನೀರು, ಹೊನ್ನೆಕೆರೆ ಕೋಡಿ ನೀರು ನುಗ್ಗಿದೆ. ಈ ಪ್ರದೇಶದ ತೋಟಗಳಲ್ಲಿ ಮೂರ್ನಾಲ್ಕು ಅಡಿ ನೀರು ನಿಂತಿದೆ. ಚೀರನಹಳ್ಳಿ ರಸ್ತೆಯನ್ನು ಎತ್ತರ ಮಾಡಿರುವುದರಿಂದ ತೋಟಗಳಲ್ಲಿನ ನೀರು ಹಿರೇಕೆರೆಗೆ ಹರಿಯುತ್ತಿಲ್ಲ. ಸುಮಾರು ಹದಿನೈದು ದಿನಗಳಿಂದ ತೋಟಗಳಲ್ಲಿ ನೀರು ನಿಂತಿದ್ದು, ಇನ್ನೂ ಸ್ವಲ್ಪ ದಿನ ನೀರು ಖಾಲಿ ಆಗದಿದ್ದರೆ ಅಡಿಕೆ ಮರಗಳು ಒಣಗಿ ಹೋಗುತ್ತವೆ. ತೋಟ ಒಣಗಿದರೆ ರೈತರಿಗೆ ಆಗುವ ನಷ್ಠವನ್ನು ಭರಿಸುವವರು ಯಾರು’ ಎಂದು ರೈತರು ಆರೋಪಿಸಿದರು.
‘ಒಂದು ತಿಂಗಳಿನಿಂದ 8 ಎಕರೆ ಅಡಿಕೆ ತೋಟದಲ್ಲಿ ನೀರು ನಿಂತಿದೆ. ನೀರು ಮುಂದಕ್ಕೆ ಹರಿಯದಿದ್ದರೆ ಅಡಿಕೆ ಮರಗಳು ಒಣಗಿ ಹೋಗುತ್ತವೆ’ ಎಂದುಕಾವಲ್ ಮಂಜಣ್ಣ ಅಳಲು ತೋಡಿಕೊಂಡರು.
ರೈತ ಸಂಘದ ನಗರ ಘಟಕದ ಗೌರವಾಧ್ಯಕ್ಷ ಬಸವನಕೋಟೆ ನಾಗರಾಜ್, ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಅಜಯ್, ಡಿ.ಮಲ್ಲಪ್ಪ, ರೇಣು, ಮಂಜಣ್ಣ, ರವಿ, ಹಾಲೇಶ್ ಭರತ್, ಶಿವಲಿಂಗಸ್ವಾಮಿ,ರಾಜಪ್ಪ, ಕುಮಾರಯ್ಯ, ರಂಗಸ್ವಾಮಿ ಇದ್ದರು.