ಚಿತ್ರದುರ್ಗ: ಮುಂಗಾರುಪೂರ್ವ ಮಳೆ ಚುರುಕು ಪಡೆದಿದ್ದು, ವರುಣ ನಿತ್ಯ ಕೃಪೆ ತೋರುತ್ತಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ನಗರದ ಜನರಿಗೆ ಮಳೆ ಶುರುವಾಗುತ್ತಿದ್ದಂತೆಯೇ ಮೈ ಕಂಪಿಸತೊಡಗಿದೆ. ನಗರ, ಪಟ್ಟಣಗಳನ್ನು ಮಳೆಗಾಲಕ್ಕೆ ಪರಿಪೂರ್ಣವಾಗಿ ಸಜ್ಜುಗೊಳಿಸದ ಪರಿಣಾಮ ವರ್ಷಧಾರೆ ಹರ್ಷ ಮೂಡಿಸುವ ಬದಲು ಭೀತಿ ಸೃಷ್ಟಿಸುತ್ತಿದೆ.
ಮುಂಗಾರಿನ ಅವಘಡ ಅರಿತಿರುವ ಜಿಲ್ಲಾಡಳಿತ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಮೇ 9ರಂದು ಸಭೆ ನಡೆಸಿ ಸಂಭಾವ್ಯ ಪ್ರಕೃತಿ ವಿಕೋಪ ನಿರ್ವಹಣೆಗೆ ತಯಾರಾಗುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಸಭೆ ನಡೆದು ಹತ್ತು ದಿನ ಕಳೆದರೂ ಸಿದ್ಧತೆಗಳು ಪೂರ್ಣಗೊಂಡಿಲ್ಲ.
ಸಣ್ಣ ಮಳೆ ಸುರಿದರೂ ನಗರ, ಪಟ್ಟಣ ವ್ಯಾಪ್ತಿಯ ಎಲ್ಲೆಂದರಲ್ಲಿ ನೀರು ನುಗ್ಗುತ್ತದೆ. ನೀರು ಸರಾಗವಾಗಿ ಹರಿದು ಹೋಗುವ ಕಾಲುವೆ, ಚರಂಡಿಗಳು ಮಳೆಗಾಲಕ್ಕೆ ಅಸ್ತವ್ಯಸ್ತಗೊಳ್ಳುತ್ತಿವೆ. ಮೇ ತಿಂಗಳಲ್ಲಿ ಮಳೆಗಾಲದ ಸಿದ್ಧತೆ ಕೈಗೊಳ್ಳಲು ನಗರ, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಅಗತ್ಯ ಸೂಚನೆ ಬರುವವರೆಗೂ ಈ ಕಾರ್ಯಕ್ಕೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಣ್ಣ ನೀರಾವರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಕಾರಣಕ್ಕೆ ಸಮಸ್ಯೆ ಸಕಾಲಕ್ಕೆ ಇತ್ಯರ್ಥವಾಗುತ್ತಿಲ್ಲ.
ಮಳೆ ನೀರು ಸಂರಕ್ಷಣೆಗೆ ಚಿತ್ರದುರ್ಗ ನಗರ ಮಾದರಿಯಾಗಿದೆ. ನಗರ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಹನಿ ನೀರು ವ್ಯರ್ಥ ಆಗದಂತಹ ವ್ಯವಸ್ಥೆಯನ್ನು ಈ ಹಿಂದೆ ಆಡಳಿತ ನಡೆಸಿರುವ ಪಾಳೆಗಾರರು ರೂಪಿಸಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೊಂಡ, ಕೆರೆಯ ಒಡಲು ಸೇರುವಂತೆ ಕಾಲುವೆ ನಿರ್ಮಿಸಿದ್ದಾರೆ. ಆದರೆ, ಈ ಕಾಲುವೆಗಳ ರಕ್ಷಣೆಯಲ್ಲಿ ನಗರಸಭೆ ವಿಫಲವಾಗಿದೆ. ರಾಜಕಾಲುವೆಗಳು ಹಲವೆಡೆ ಒತ್ತುವರಿಯಾಗಿದ್ದು, ಮಳೆ ನೀರ ಚರಂಡಿಗಳ ಮೇಲೂ ಕಟ್ಟಡಗಳು ತಲೆ ಎತ್ತಿವೆ. ಇವುಗಳನ್ನು ತೆರವುಗೊಳಿಸುವ ಪ್ರಯತ್ನ ಇನ್ನೂ ಮುಗಿದಿಲ್ಲ.
ಚಂದ್ರವಳ್ಳಿ, ಕಲ್ಲಿನ ಕೋಟೆ, ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆ ನೀರು ಹರಿದು ಹೋಗಲು ರಾಜಕಾಲುವೆಗಳಿವೆ. ಚಂದ್ರವಳ್ಳಿ ಭಾಗದಿಂದ ಹೊಳಲ್ಕೆರೆ ರಸ್ತೆ, ಕನಕ ವೃತ್ತದ ಮೂಲಕ ಹಾದು ಹೋಗುವ ರಾಜಕಾಲುವೆ ಕಣ್ಣಿಗೆ ಕಾಣಿಸುವ ಸ್ಥಿತಿಯಲ್ಲಿದೆ. ಜೋಗಿಮಟ್ಟಿ ರಸ್ತೆ, ಜಿಲ್ಲಾ ಆಸ್ಪತ್ರೆ ಸಮೀಪದಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ ಕೆಳಗೋಟೆ ಸಮೀಪ ಕಸ ತುಂಬಿದೆ. ಸರಸ್ವತಿಪುರಂ, ಮಾಳಪ್ಪನಹಟ್ಟಿ, ಎಂಪಿಎಂಸಿ, ದಾವಣಗೆರೆ ರಸ್ತೆ, ಗುಮಾಸ್ತರ ಕಾಲೊನಿ ಬಳಿ ರಾಜಕಾಲುವೆಗಳಿವೆ. ಅಮೃತ್ ನಗರ ಯೋಜನೆಯಡಿ ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆದಿದೆಯಾದರೂ ಪರಿಪೂರ್ಣಗೊಂಡಿಲ್ಲ.
ಮಳೆ ನೀರು ಚರಂಡಿ, ರಾಜಕಾಲುವೆಗಳಲ್ಲಿ ಕಸ, ತ್ಯಾಜ್ಯ ಹೆಚ್ಚಾಗಿದೆ. ಬಡಾವಣೆಯ ನಿವಾಸಿಗಳು ಮನೆಯ ತ್ಯಾಜ್ಯವನ್ನು ಕಾಲುವೆ, ಚರಂಡಿಗಳಿಗೆ ಸುರಿಯುತ್ತಿರುವುದರಿಂದ ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನೀರು ನುಗ್ಗುವಂತಾಗಿದೆ. ಕೆಳಗೋಟೆ, ಗುಮಾಸ್ತರ ಕಾಲೊನಿ, ಪಿ ಅಂಡ್ ಟಿ ಕ್ವಾಟ್ರಸ್, ಚನ್ನಕ್ಕಿಹೊಂಡ, ನೆಹರೂ ನಗರ ಸೇರಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಭೀತಿ ಇದೆ.
‘ಮಳೆ ನೀರು ಚರಂಡಿ ಹಾಗೂ ರಾಜಕಾಲುವೆ ಸ್ವಚ್ಛಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಪ್ಲಾಸ್ಟಿಕ್ ತ್ಯಾಜ್ಯ, ಮನೆ ಬಳಕೆ ವಸ್ತುಗಳು ಹೆಚ್ಚಾಗಿ ಕಾಲುವೆಗಳಲ್ಲಿ ಸಿಕ್ಕಿವೆ. ಮನೆಯ ತ್ಯಾಜ್ಯವನ್ನು ಚರಂಡಿಗೆ ಎಸೆಯುವುದನ್ನು ಜನರು ಕೈಬಿಡಬೇಕು. ಪ್ರಜ್ಞಾವಂತರಾಗಿ ವರ್ತಿಸಿದರೆ ಈ ಸಮಸ್ಯೆ ಸೃಷ್ಟಿಯಾಗದು’ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.
ಈವರೆಗೆ ಮಳೆ ನೀರು ನುಗ್ಗಿ ಸಮಸ್ಯೆ ಆಗಿರುವ ಬಗ್ಗೆ ದೂರುಗಳು ಬಂದಿಲ್ಲ. ತಗ್ಗು ಪ್ರದೇಶಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲಾಗಿದೆ. ರಾಜಕಾಲುವೆ ಮಳೆ ನೀರು ಚರಂಡಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ಎಂ.ರೇಣುಕಾ ಪೌರಾಯುಕ್ತೆ ಚಿತ್ರದುರ್ಗ
ಮಳೆಗಾಲದಲ್ಲಿ ಮಾತ್ರ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಕಾಲುವೆ ಸಂರಕ್ಷಣೆ ಕಾಳಜಿ ಇದ್ದರೆ ಬೇಸಿಗೆಯಲ್ಲಿ ಸ್ವಚ್ಛತೆ ಹಾಗೂ ದುರಸ್ತಿ ಮಾಡಿಸಬಹುದಿತ್ತು. ಇದರಿಂದ ಹಣ ವ್ಯಯ ತಪ್ಪುತ್ತದೆ.ಕಾಂತಪ್ಪ ಚಳ್ಳಕೆರೆ
ರಾಜಕಾಲುವೆ ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ. ಮಲೇರಿಯಾ ಕಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ. ಗಿರಿಜಮ್ಮ ಗೃಹಿಣಿ ಚಳ್ಳಕೆರೆರಾಜಕಾಲುವೆ ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ. ಮಲೇರಿಯಾ ಕಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ. ಗಿರಿಜಮ್ಮ ಗೃಹಿಣಿ ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.