ಹೊಳಲ್ಕೆರೆ: ರಾಜ್ಯ ಬಿಜೆಪಿಯಲ್ಲಿ ಕಿತ್ತಾಟ, ವೈಮನಸ್ಸು, ಭಿನ್ನಾಭಿಪ್ರಾಯಗಳಿದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಬಿದ್ದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಪಟ್ಟಣದಲ್ಲಿ ಬುಧವಾರರೂ 50 ಕೋಟಿ ವೆಚ್ಚದ ರಾಜ್ಯಹೆದ್ದಾರಿ-47ರ ನೂತನ ರಸ್ತೆ,ರೂ 2.5 ಕೋಟಿ ವೆಚ್ಚದ ಮಹಾತ್ಮಾ ಗಾಂಧಿ ವಾಣಿಜ್ಯ ಸಂಕಿರ್ಣ,ರೂ 2 ಕೋಟಿ ವೆಚ್ಚದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹನುಮಂತ ದೇವರ ಕಣಿವೆಯಲ್ಲಿ ನಿರ್ಮಿಸಿರುವರೂ 2.5 ಕೋಟಿ ವೆಚ್ಚದ ವಿಐಪಿ ವಸತಿ ಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜು ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ನಮ್ಮ ಸರ್ಕಾರ ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ಕ್ಷೇತ್ರದಲ್ಲಿರೂ 700 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಆಗಿದ್ದು, ನನ್ನಿಂದಲೂ ಇಷ್ಟು ಕೆಲಸ ಮಾಡಲಾಗಿಲ್ಲ. ಶಾಸಕ ಎಂ. ಚಂದ್ರಪ್ಪ ಹಠವಾದಿಯಾಗಿದ್ದು, ಹಿಡಿದ ಕೆಲಸವನ್ನು ಎಷ್ಟೇ ಕಷ್ಟ ಬಂದರೂ ಮುಗಿಸದೇ ಬಿಡುವುದಿಲ್ಲ. ಜನರ ತೆರಿಗೆಯ ದುಡ್ಡು ಅವರ ಕಲ್ಯಾಣಕ್ಕೇ ವಿನಿಯೋಗ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದರು.
ಬಿಎಸ್ವೈ ಗುಣಗಾನ: ಸಚಿವರು ತಮ್ಮ ಭಾಷಣದ ಉದ್ದಕ್ಕೂ ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗುಣಗಾನ ಮಾಡಿದರು. ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನನಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಜಾರಿಲ್ಲ. ಅಧಿಕಾರ ನಮ್ಮನ್ನು ಹುಡುಕಿ ಬರಬೇಕೇ ಹೊರತು, ನಾವು ಅದನ್ನು ಅರಸಿ ಹೋಗಬಾರದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮೋಹನ್, ಪುಟ್ಟೀಬಾಯಿ, ಪ.ಪಂ. ಅಧ್ಯಕ್ಷೆ ಗೀತಾ ಕೃಷ್ಣಮೂರ್ತಿ, ಲಿಂಗರಾಜು, ಚನ್ನಕೇಶವ, ಕೆ.ಸಿ. ರಮೇಶ್, ಜಿ.ಪಂ. ಸದಸ್ಯ ಪಿ.ಆರ್. ಶಿವಕುಮಾರ್, ಮಾಜಿ ಶಾಸಕ ಪಿ. ರಮೇಶ್, ಲಕ್ಷ್ಮೀ, ಲವಮಧು, ಜಗದೀಶ್, ಕೃಷ್ಣಮೂರ್ತಿ, ರಾಜಶೇಖರ್, ತಿಮ್ಮೇಶ್, ಶೇಖರ್, ತಹಶೀಲ್ದಾರ್, ಡಿ.ಸಿ. ಮೋಹನ್, ರಾಮಣ್ಣ, ಬಸವಂತಪ್ಪ, ಯಶೋದಾ, ರಾಜಪ್ಪ ಹಾಜರಿದ್ದರು.