ನಾಯಕನಹಟ್ಟಿ: ಎ ದರ್ಜೆಯ ಮಾನ್ಯತೆ ಪಡೆದ ಐತಿಹಾಸಿಕ ಹಿನ್ನೆಲೆಯ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಹಲವು ಜಿಲ್ಲೆಗಳು ಸೇರಿದಂತೆ ನೆರೆರಾಜ್ಯ ಆಂಧ್ರದ ರಾಯದುರ್ಗ, ಅನಂತಪುರ, ಕಲ್ಯಾಣದುರ್ಗದಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಎ ದರ್ಜೆಯ ಮಾನ್ಯತೆ ಪಡೆದಿದೆ. ಆದರೆ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
ಪಟ್ಟಣ ಪಂಚಾಯ್ತಿಯಿಂದ ದೇವಾಲಯಕ್ಕೆ ನೀರು ಸರಬರಾಜು ವ್ಯವಸ್ಥೆಯಿಲ್ಲ. ಹಾಗಾಗಿ ದೇವಾಲಯದ ಸಮಿತಿಯೇ ಈ ಹಿಂದೆ ಹಲವು ಕೊಳವೆ ಬಾವಿಗಳನ್ನು ಕೊರೆಯಿಸಿ ನೀರು ಪಡೆಯುತ್ತಿತ್ತು. ಆದರೆ, ಒಂದು ತಿಂಗ ಳಿನಿಂದ ದೇವಾಲಯಕ್ಕೆ ಸರಬರಾಜು ಆಗುವ ಎಲ್ಲಾ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಶುಚಿತ್ವಕ್ಕೆ ಹಾಗೂ ನಿತ್ಯ ಅನ್ನದಾಸೋಹದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಿದೆ ಎಂದು ಗ್ರಾಮಸ್ಥ ಪಿ.ಬಿ.ತಿಪ್ಪೇಸ್ವಾಮಿ ಅಳಲು ತೋಡಿಕೊಂಡರು.
ದುರಸ್ತಿ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು: ‘ಎರಡು ವರ್ಷಗಳ ಹಿಂದೆ ಅನ್ನದಾಸೋಹಕ್ಕಾಗಿ ಅಡುಗೆ ಮಾಡಲು ಅಡುಗೆ ಅನಿಲ ಬಳಸುತ್ತಿದ್ದರು. ಇದಕ್ಕಾಗಿ ತಿಂಗಳಿಗೆ ಸುಮಾರು ₹ 75 ಸಾವಿರ ಬೇಕಾಗುತ್ತಿತ್ತು. ಈ ದುಬಾರಿ ವೆಚ್ಚ ತಗ್ಗಿಸಲು ಹಿಂದೆ ಇದ್ದ ವ್ಯವಸ್ಥಾಪನಾ ಸಮಿತಿ ₹ 2.60 ಲಕ್ಷ ವೆಚ್ಚದ ಬಾಯ್ಲರ್ ವ್ಯವಸ್ಥೆ ಮಾಡಿತು. ಇದರಿಂದ ತಿಂಗಳಿಗೆ ₹5 ರಿಂದ 10 ಸಾವಿರ ಸಾಕಾಗುತ್ತಿತ್ತು. ಬಾಯ್ಲರ್ ಕೆಟ್ಟು 20 ದಿನಗಳು ಕಳೆದಿವೆ. ಯಾವ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸಿಲ್ಲ’ ಎಂದು ಗ್ರಾಮಸ್ಥ ಉಮೇಶ್ ದೂರಿದರು.
‘ ಅಡುಗೆ ತಯಾರಿಕೆ ಮತ್ತೆ ಅಡುಗೆ ಅನಿಲ ಬಳಸಲಾಗುತ್ತಿದ್ದು, ಇದರಿಂದ ಸಾಕಷ್ಟು ಹಣ ಪೋಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಹಾರ ಕಲ್ಪಿಸದ ಅಧಿಕಾರಿಗಳು: ‘ದೇವಾಲಯದಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳಿವೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಕುಡಿಯಲು ನೀರಿಲ್ಲ, ದೇವಾಲಯದ ಮುಂದೆ ವಾಹನಗಳ ನಿಲುಗಡೆಗೆ ಸ್ಥಳವಿಲ್ಲ, ನೂತನ ವ್ಯವಸ್ಥಾಪನಾ ಸಮಿತಿ ಆಯ್ಕೆ ವಿಳಂಬವಾಗುತ್ತಿದೆ, ದೇವಾ ಲಯದ ಆಡಳಿತವನ್ನು ನೋಡಿಕೊಳ್ಳಲು ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದೆ’ ಎಂದು ತಿಳಿಸಿದರು.
‘ಆಡಳಿತಾಧಿಕಾರಿಯಾಗಿ ತಹ ಶೀಲ್ದಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ದೇವಾಲಯದ ಮುಖ್ಯಸ್ಥರಾಗಿ ಉಪವಿಭಾಗಾಧಿಕಾರಿ ಇದ್ದಾರೆ. ಈ ಎಲ್ಲಾ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡುತ್ತಿಲ್ಲ. ಇದರಿಂದ ದೇವಾಲಯದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ’ ಎಂದು ಗ್ರಾಮಸ್ಥ ದಳವಾಯಿ ರುದ್ರಮುನಿ ಆಕ್ಷೇಪ ವ್ಯಕ್ತಪಡಿಸಿದರು.
‘ಈ ಹಿಂದೆ ಇದ್ದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಧಿಕಾರಿಗಳು ದೇವಾಲಯದ ಮೂಲಸೌಕರ್ಯ ವ್ಯವಸ್ಥೆಗಳ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ಶೀಘ್ರವಾಗಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದರೆ ಅಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮಸ್ಥರಾದ ಪಿ.ರುದ್ರೇಶ್, ಮಹಂತೇಶ್, ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ,