ನಾಯಕನಹಟ್ಟಿ: ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವು ದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಪಟ್ಟಣ ಪಂಚಾಯ್ತಿ ಸದಸ್ಯೆ ಟಿ.ಮಂಜುಳಾಶ್ರೀಕಾಂತ್ ಹೇಳಿದರು.
ಪಟ್ಟಣದ 9ನೇ ವಾರ್ಡ್ನಲ್ಲಿ ಮಂಗಳವಾರ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಕಾರ್ಯಾದೇಶ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಬಯಲು ಶೌಚಾಲಯದಿಂದ ಮನುಷ್ಯನಿಗೆ ನಾನಾ ಬಗೆಯ ರೋಗಗಳು ಹರಡುತ್ತವೆ. ಸ್ವಚ್ಛತೆ ಎಲ್ಲಿ ಇರುವುದೋ ಅಲ್ಲಿ ಮನಸ್ಸು ಶಾಂತವಾಗಿರುತ್ತದೆ. ವಾರ್ಡ್ನ ಪ್ರತಿಯೊಂದು ಕುಟುಂಬವೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಈಗಾಗಲೇ ಸರ್ಕಾರದಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹ 15ಸಾವಿರ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಶೌಚಾಲಯದ ಗುಂಡಿ ತೆಗೆದು ಜಿಪಿಎಸ್ ಮಾಡಿಸಿದರೆ ₹ 2 ಸಾವಿರ, ನಂತರ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತದೆ. ಇದನ್ನು ಪಡೆದುಕೊಂಡು ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಳ್ಳಿ’ ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ವಿಷಯ ನಿರ್ವಾಹಕ ಟಿ.ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಬಸಮ್ಮ, ಎಂ.ತಿಪ್ಪಮ್ಮ, ತಿಪ್ಪೀರಮ್ಮ, ಯಶೋದಮ್ಮ, ರೇಣುಕಮ್ಮ ಎಂ.ಟಿ.ಮಂಜುನಾಥ್, ಶ್ರೀಕಾಂತ್ ಉಪಸ್ಥಿತರಿದ್ದರು.