ಮಂಗಳೂರು: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ತುಳುನಾಡು ಮೂಲದ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ‘ನಾಚನೇವಾಲಿ’ ಎಂದು ಹೇಳಿರುವುದು ಖಂಡನೀಯ’ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ತ್ರೀಯರನ್ನು ಟೀಕಿಸಲೆಂದೇ ಭಾರತ್ ಜೋಡೊ ನ್ಯಾಯ ಯಾತ್ರೆ ಮಾಡಲಾಗುತ್ತಿದೆಯೇ? ಸ್ತ್ರೀಯನ್ನು ಪೂಜಿಸುವ ಸಂಸ್ಕೃತಿ ಹೊಂದಿರುವ ಭಾರತದಲ್ಲಿ, ರಾಹುಲ್ ಗಾಂಧಿ ಅವರು ಸ್ತ್ರೀಯನ್ನು ಅವಹೇಳನ ಮಾಡಿದ್ದಾರೆ. ಕರ್ನಾಟಕದ ಮಹಿಳೆಯೊಬ್ಬರನ್ನು ಈ ರೀತಿ ಅವಮಾನಿಸಿದರೂ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಪ್ರಶ್ನಿಸಲಿಲ್ಲ’ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗುತ್ತಿದೆ. ಇಂಥವರ ಕೈಗೆ ಅಧಿಕಾರದ ಚುಕ್ಕಾಣಿ ನೀಡಿದರೆ ಮಹಿಳೆಯರು ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬರಬಹುದು ಎಂದರು.
ಪಕ್ಷದ ಪ್ರಮುಖರಾದ ಪೂರ್ಣಿಮಾ, ಪೂಜಾ ಪೈ ಇದ್ದರು.