ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಶಾಸಕ ದಿವಂಗತ ವಸಂತ ಬಂಗೇರಗೆ ನುಡಿನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಸಂತ ಬಂಗೇರ ಅವರು ಸದಾ ಬಡವರ ಪರ, ಸತ್ಯದ ಪರ ಇದ್ದರು. ಬಡವರ ಕೆಲಸ ಮಾಡಿಕೊಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರುಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Published 21 ಮೇ 2024, 11:25 IST
Last Updated 21 ಮೇ 2024, 11:25 IST
ಅಕ್ಷರ ಗಾತ್ರ

ಬೆಳ್ತಂಗಡಿ: 'ವಸಂತ ಬಂಗೇರ ಅವರು ಸದಾ ಬಡವರ ಪರ, ಸತ್ಯದ ಪರ ಇದ್ದರು. ಬಡವರ ಕೆಲಸ ಮಾಡಿಕೊಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಗಲಿದ ಮಾಜಿ ಶಾಸಕ ದಿ.‌ವಸಂತ ಬಂಗೇರಗೆ ನುಡಿನಮನ ಸಲ್ಲಿಸಲು ತಾಲ್ಲೂಕಿನ ಕುವೆಟ್ಟುವಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಕ್ಷೇತ್ರದ ಅಭಿವೃದ್ಧಿ ವಿಚಾರಗಳಲದಲಿ ಬಂಗೇರ ಅವರಿಗೆ ತಾನು ಯಾರ ಜೊತೆ ಮಾತನಾಡುತ್ತಿದ್ದೇನೆ ಎನ್ನುವುದು ಮುಖ್ಯ ಆಗುತ್ತಿರಲಿಲ್ಲ. ಬಡವರ ಸಮಸ್ಯೆ ಪರಿಹರಿಸುವುದೇ ಅವರಿಗೆ ಮುಖ್ಯವಾಗಿತ್ತು.ಮಾನವಿಯತೆ ಇದ್ದ ಮನುಷ್ಯ. ಬದುಕನ್ನು ಸಾರ್ಥಕ ಮಾಡಿಕೊಂಡ ವ್ಯಕ್ತಿ' ಎಂದು ಕೊಂಡಾಡಿದರು.

'ನನಗೆ ಬಹಳ ಹತ್ತಿರವಾಗಿದ್ದ ವ್ಯಕ್ತಿ ಆತ.‌ ನನ್ನೊಂದಿಗೆ ಎಷ್ಟೇ ಸ್ನೇಹ ಇದ್ದರೂ, ನಾನು ಮುಖ್ಯಮಂತ್ರಿ ಆಗಿದ್ದಾಗ ವೈಯಕ್ತಿಕ ಕೆಲಸಕ್ಕೆ ಯಾವತ್ತೂ ಬಂದವರಲ್ಲ.‌ ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಕೆಲಕ್ಕೆ ಮಾತ್ರ ಬರುತ್ತಿದ್ದರು' ಎಂದರು.

'ಈಗ ಕೆಲವರು ಮೊದಲ ಸಲ‌ ಗೆದ್ದಾಗಲೇ ಮಂತ್ರಿ ಆಗಕು ಲಾಬಿ ಶುರು ಮಾಡುತ್ತಾರೆ. ಆದರೆ ಬಂಗೇರ ಬಿಜೆಪಿ, ಜನತಾದಳವೂ ಸೇರಿದಂತೆ ಮೂರು ಪಕ್ಷಗಳಲ್ಲಿ ಐದು ಸಲ ಶಾಸಕರಾದರೂ ಯಾವತ್ತೂ ಮಂತ್ರಿ ಆಗಬೇಕು ಎಂದು ಲಾಬಿ ಮಾಡಿದವರಲ್ಲ. 2023ರ ಚುನಾವಣೆಯಲ್ಲಿ ರಂಜನ್ ಗೌಡ ಅವರಿಗೆ ಟಿಕೆಟ್ ಕೊಡುವಂತೆ ಕೇಳಿದ್ದರು. ಬಂಗೇರ ಅವರನ್ನೇ ಚುನಾವಣೆಗೆ ನಿಲ್ಲುವಂತೆ ಕೋರಿದ್ದೆ. ಅದಕ್ಕೆ ಒಪ್ಪಲೇ ಇಲ್ಲ. ಯಾವ ಕಾರಣಕ್ಕೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ತೀರ್ಮಾನ ಮಾಡಿದ್ದೇನೆ ಎಂದಿದ್ದರು. ಈ ಸಲ ಚುನಾವಣೆಗೆ ನಿಂತು ಗೆದ್ದಿದ್ಧರೆ ಅವರು ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತಿದ್ದರು' ಎಂದರು

'ವಸಂತ ಬಂಗೇರ ಅವರು ನಿಧನರಾದ ದಿನ ನಾನು ಕರ್ನಾಟಕದಲ್ಲಿ ಇರಲಿಲ್ಲ. ಹಾಗಾಗಿ ಅವತ್ತು ಅಂತ್ಯಕ್ರಿಯೆಯ ಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದರು.

ಬಂಗೇರ ಅವರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು

ಗೆಳೆತನದ ಮೆಲುಕು: ತಮ್ಮ ಹಾಗೂ ಬಂಗೇರ ನಡುವಿನ ಸ್ನೇಹದ ಕುರಿತು ಹಂಚಿಕೊಂಡ ಮುಖ್ಯಮಂತ್ರಿ,

''ವಿಧಾನಸಭೆಗೆ ನಾನೂ ಅವರು 1983ನೇ ಇಸವಿಯಲ್ಲಿ ಪ್ರವೇಶಿಸಿದೆವು. ನಾನು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಬಿಜೆಪಿಯಿಂದ 18 ಜನ ಗೆದ್ದಿದ್ದರು.‌ ಅವರಲ್ಲಿ ಬಂಗೇರ ಅವರೂ ಒಬ್ಬರು. ಅವರು ಬಿಜೆಪಿಯಿಂದ ಗೆದ್ದಿದ್ದರೂ, ನಾನು ಮೆಚ್ಚಿದ್ದ ಶಾಸಕರಲ್ಲಿ ಅವರೂ ಒಬ್ಬರು. ಅವತ್ತಿನಿಂದಲೂ ನಾನೂ, ಅವರು ಬಹಳ ದಿರ್ಘ ಕಾಲದ ಸ್ನೇಹಿತರು. ಬಂಗೇರ ಅಗಲುವಿಕೆಯಿಂದ ನನಗೆ ವೈಯಕ್ತಿಕವಾಗಿಯೂ ನಷ್ಟ ಅಗಿದೆ. ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಬಹಳ ನೋವಿನ ಸಂಗತಿ' ಎಂದರು.

'ಅವರ ನಿಷ್ಠುರ, ನೇರ ನುಡಿಯ ವ್ಯಕ್ತಿತ್ವವನ್ನು ನಾನು ಬಹಳ‌ವಾಗಿ ಮೆಚ್ಚಿದ್ದೆ. ಅವರು ಸತ್ಯ ಹೇಳಲು ಹಿಂಜರಿಯುತ್ತಿರಲಿಲ್ಲ.‌ ಎಷ್ಟೇ ಜನ ಇರಲಿ, ಯಾವುದೇ ಸಂದರ್ಭ, ಯಾವುದೇ ಸನ್ನಿವೇಶ ಇರಲಿ, ಸತ್ಯವನ್ನು ನೇರವಾಗಿ ಹೇಳುವ ವಿಶೇಷ ಗುಣ ಬೆಳೆಸಿಕೊಂಡಿದ್ದರು' ಎಂದರು.

'ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯ ಅಲ್ಲ. ಹುಟ್ಟು ಸಾವಿನ ನಡುವಿನ ಅಂತರವನ್ನು ಸಾರ್ಥಕ ಮಾಡಿದ್ದೇವಾ ಎನ್ನುವುದು ಮುಖ್ಯ.ಅಭಿವೃದ್ಧಿ ಪರ ಹಾಗೂ ಜನಪರ ಕಾಳಜಿ ಇದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೆವೆ. ಬಂಗೇರ ಅವರು ಅಪರೂಪದ ರಾಜಕಾರಣಿ. ಅವರ ಸಾವಿನಿಂದ ಕರ್ನಾಟಕದ ರಾಜಕಾರಣಕ್ಕೆ ನಷ್ಟ ಆಗಿದೆ. ಅವರು ಇಷ್ಟು ಜಲ್ದಿ ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೆ.‌ ಇನ್ನೂ ಬಹಳ ದಿನ ಬದುಕುತ್ತಾರೆ ಎಂದೇ ಭಾವಿಸಿದ್ದೆ.‌ ಅವರ ಕುಟುಂಬ ವರ್ಗದ ದುಃಖದಲ್ಲಿ ನಾನೂ ಪಾಲುದಾರ' ಎಂದರು.

ಬೆಳ್ತಂಗಡಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರು ವೃತ್ತಕ್ಕೆ ಹೆಸರು ಇಡಬೇಕು. ಪಟ್ಟಣದಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು, ವೃತ್ತವೊಂದನ್ನು ಅಭಿವೃದ್ಧಿಪಡಿಸಿ ಅವರ ಹೆಸರು ಇಡಬೇಕು ಎಂದು ಇಲ್ಲಿನ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಈ ಕಾರ್ಯಗಳನ್ನು. ಸರ್ಕಾರದಿಂದ ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, 'ವ್ಯಕ್ತಿಯೊಬ್ಬ ಅಧಿಕಾರದಲ್ಲಿದ್ದಾಗ ಹೋದ ಕಡೆ ಎಷ್ಟು ಜನ ಸೇರುತ್ತಾರೆ ಎಂಬುದು ಮುಖ್ಯವಲ್ಲ. ಅಂತ್ಯಸಂಸ್ಕಾರಕ್ಕೆ ಎಷ್ಟು ಜನ ಬರುತ್ತಾರೆ ಎಂಬುದು ನಮ್ಮ ವ್ಯಕ್ತಿತ್ವವನ್ನು ತೋರುತ್ತದೆ.‌ ಬಂಗೇರ ಅವರು ಎಷ್ಡು ಜನರ ಪ್ರೀತಿ ಸಂಪಾದಿಸಿದ್ದರು ಎನ್ನುವುದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದರು.

'ಬಂಗೇರ ಅವರ ಪ್ರತಿ ಮಾತಿನಲ್ಲಿ ಅರ್ಥ ಇತ್ತು. ಜನ ಸಾಮಾನ್ಯರಿಗೆ ಉಪದ್ರ ಆದಾಗ ಅವರಿಗೆ ಕೋಪ ಎಲ್ಲಿಂದ ಬರುತ್ತದೆ ಗೊತ್ತಾಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದಾಗಲೂ ಬಂಗೇರ ಅವರು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ಬಂಗೇರ ಅವರ ಅಗಲುವಿಕೆಯ ಬಳಿಕ ಅತ್ಯಂತ ಬಡವರು ಸೋದರನನ್ನು ಕಳೆದುಕೊಂಡ ಭಾವನೆ ಹೊಂದಿದ್ದಾರೆ.. ಅಧಿಕಾರ ಇಲ್ಲದಿದ್ದಾಗಲೂ ಬಂಗೇರ ಅದೇ ವರ್ಚಸ್ಸು ಉಳಿಸಿಕೊಂಡಿದ್ದರು. ಅವರ ಜೀವನವೇ ರಾಜಕಾರಣಿಗಳಿಗೆ ಸಂದೇಶ' ಎಂದರು.

ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ, ' ಬಂಗೇರ ಅವರು ಸಮಾಜದ ಶಕ್ತಿ. ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಅವರ ಅಗಲುವಿಕೆ ಮನುಕುಲಕ್ಕೆ ನಷ್ಟವಾಗಿದೆ ' ಎಂದರು.

ಪ್ರಾಧ್ಯಾಪಕ ಚೇತನ್ ಸೋಮೇಶ್ವರ, 'ವಸಂತ ಬಂಗೇರರು ಯಾರನ್ನೂ ಧ್ವೇಷ ಮಾಡಲಿಲ್ಲ. ಸಮಾಜದಲ್ಲಿ ಆರೋಗ್ಯ ಕೆಟ್ಟು ಹೋದಾಗ ಅವರಲ್ಲಿ ಸಿಡುಕು ಉಂಟಾಗುತ್ತಿತ್ತು. ರಾಜಕೀಯವಾಗಿ ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಜನ ಅವರ ಹೃದಯದ ಭಾವಕ್ಕೆ ಬೆಲೆ ಕೊಡುತ್ತಿದ್ದರು. ಜನರಿಗೆ ಉಪಕಾರ ಮಾಡುವುದು ಅವರ ರಕ್ತಗತ ಗುಣವಾಗಿತ್ತು. ಸೋತಾಗಲು ಸ್ಥೈರ್ಯ ಕಳೆದುಕೊಳ್ಳದೆ ಜನರ ಜತೆ ಸದಾ ಕಾಲ ತೊಡಗಿಸಿಕೊಂಡವರು. ನೇರ ನಡೆ ನುಡಿಯ ಜತೆ ಹೆಂಗರುಳಿನ ವ್ಯಕ್ತಿತ್ವ ಅವರದು' ಎಂದರು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಮ್ಮರ್ ಕುಂಞ ಮುಸ್ಲಿಯಾರ್ ನುಡಿ ನಮನ ಸಲ್ಲಿಸಿದರು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ಅಶೋಕ್ ಕುಮಾರ್ ರೈ, ಹರೀಶ್ ಪೂಂಜ, ಮಾಜಿ ಸಚಿವರಾದ ರಮಾನಾಥ ರೈ , ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ , ಗಂಗಾಧರ ಗೌಡ, ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜ ಶೇಖರ ಕೋಟ್ಯಾನ್, ಉಪಾಧ್ಯಕ್ಷರಾದ ಪೀತಾಂಬರ ಹೇರಾಜೆ, ಯೋಗೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಟಂಚಿ ಪದ್ಮರಾಜ ಆರ್, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಐವನ್ ಡಿಸೋಜ, ಆಯನೂರು ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಕೆ ವಸಂತ ಬಂಗೇರರ ಪತ್ನಿ ಸುಜಿತ ವಿ ಬಂಗೇರ, ಮಕ್ಕಳಾದ ಪ್ರೀತಿತ ಧರ್ಮ ವಿಜೇತ್, ಬಿನುತಾ ಬಂಗೇರ, ಅಳಿಯಂದಿರಾದ ಧರ್ಮ ವಿಜೇತ್, ಸಂಜೀವ ಕಣೆಕಲ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT