ಮಂಗಳೂರು: ‘ಮರೋಳಿಯಲ್ಲಿ ಎರಡು ದಿನಗಳ ಹಿಂದೆ (ಮಾ.26) ಆಯೋಜಿಸಿದ್ದ ‘ರಂಗ್ ದ ಬರ್ಸ್’ ಕಾರ್ಯಕ್ರಮಕ್ಕೆ ಪೊಲೀಸರಿಂದ ಪೂರ್ವಾನುಮತಿ ಪಡೆಯಲಾಗಿತ್ತು. ಹೀಗಿದ್ದಾಗಲೂ ಕಾರ್ಯಕ್ರಮಕ್ಕೆ ಕೆಲವು ಕಿಡಿಗೇಡಿಗಳು ಅಡ್ಡಿಪಡಿಸಿ, ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಯಕ್ರಮದ ಸಂಘಟಕ ಜೀವನ್ ಆಗ್ರಹಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೆಳೆಯರ ಸಹಭಾಗಿತ್ವದಲ್ಲಿ ನಡೆಯುವ ಆರನೇ ವರ್ಷದ ಕಾರ್ಯಕ್ರಮ ಇದಾಗಿತ್ತು. ತೆರೆದ ಮೈದಾನದಲ್ಲಿ ನಡೆದ ಈ ಹೋಳಿಯಲ್ಲಿ ರಾಜ್ಯದ ವಿವಿಧೆಡೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕ ಹೋಳಿಯನ್ನು ಸ್ವಲ್ಪ ಮನರಂಜನಾತ್ಮಕವಾಗಿ ಆಯೋಜಿಸಿದ್ದೇವೆಯೇ ವಿನಾ ಇಲ್ಲಿ ಅಕ್ರಮ ಅಥವಾ ಅನೈತಿಕತೆಗೆ ಅವಕಾಶ ಇರಲಿಲ್ಲ. ನೋಂದಣಿ ಮಾಡಿಕೊಂಡು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆನ್ಲೈನ್ನಲ್ಲಿ ಟಿಕೆಟ್ಗಳು ಮಾರಾಟವಾಗಿದ್ದವು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಪ್ರಚಾರವನ್ನೂ ನೀಡಲಾಗಿತ್ತು. ಹೀಗಿದ್ದಾಗಲೂ ಯಾವುದೋ ಸಂಘಟನೆಯವರು ಎನ್ನಲಾದ ಕಿಡಿಗೇಡಿಗಳು ದಾಳಿ ನಡೆಸಿದ್ದರ ಅರ್ಥವೇನು’ ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ತೊಡಗಿಸಿದ್ದ ಬಂಡವಾಳ ನಷ್ಟವಾಗಿದೆ. ದಾಳಿ ನಡೆಸಿದವರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ಶಿಕ್ಷೆ ಆಗಬೇಕು. ಈ ರೀತಿಯ ಪರಿಸ್ಥಿತಿ ಮುಂದೆ ಯಾರಿಗೂ ಬರಬಾರದು ಎಂದು ಆಗ್ರಹಿಸಿದರು. ಕಾರ್ಯಕ್ರಮದ ಆಯೋಜಕರಾದ ಚರಣ್ ಹಾಗೂ ಸುಜೀರ್ ವಿನೋದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.