ಮಂಗಳೂರು: ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಹಾಸ ಹಾಗೂ ಕಾರ್ಯದರ್ಶಿ ಮಾರುತಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಿಇಒ ಸೂಚನೆ ಮೇರೆಗೆ ಮಂಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ನೇತೃತ್ವದ ತಂಡ ಹರೇಕಳ ಗ್ರಾಮಕ್ಕೆ ಭೇಟಿ ನೀಡಿ ಅವ್ಯವಹಾರದ ತನಿಖೆ ನಡೆಸಿ ವರದಿ ನೀಡಿತ್ತು.
`ಕಾರ್ಯದರ್ಶಿ ಹಾಗೂ ಪಿಡಿಒ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅವ್ಯವಹಾರದ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ಸೂಚಿಸಲಾಗಿದೆ~ ಎಂದು ಸಿಇಒ ವಿಜಯಪ್ರಕಾಶ್ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.
ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಉದ್ಯೋಗ ಚೀಟಿ ಬಳಸಿ ಎರಡು ಲಕ್ಷಕ್ಕೂ ಅಧಿಕ ಹಣ ಗುಳುಂ ಮಾಡಿದ ಆರೋಪ ಕೇಳಿಬಂದಿತ್ತು. ಗ್ರಾಮದ ಒಡ್ಡದಗುರಿ ಇಸ್ಮಾಯಿಲ್ ಮನೆಯಿಂದ ಐತಪ್ಪ ಶೆಟ್ಟಿ ಮನೆ ವರೆಗೆ ಚರಂಡಿ ಹಾಗೂ ಬದಿ ಕಟ್ಟುವ ಕಾಮಗಾರಿಯಲ್ಲಿ ಸುಮಾರು 80 ಸಾವಿರ ರೂಪಾಯಿ ದುರುಪಯೋಗವಾಗಿತ್ತು.
ಕಾಮಗಾರಿ ನಡೆಸದೆಯೇ ಹಣ ಪಡೆಯಲಾಗಿತ್ತು. ಈ ಅವ್ಯವಹಾರಕ್ಕೆ ಸಂಬಂಧಿಸಿ ಪ್ರಜಾವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೂ 29,739 ಉದ್ಯೋಗ ಖಾತರಿ ಖಾತೆಗೆ ವಾಪಸ್ ಕಟ್ಟ್ದ್ದಿದರು.