ದಾವಣಗೆರೆ: ಬೋರ್ ಕೊರೆಯುವುದನ್ನು ನೋಡುತ್ತಾ ನಿಂತಿದ್ದ ವೇಳೆ ಪೈಪ್ ಸಿಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂತೇಬೆನ್ನೂರು ಗ್ರಾಮದ ವಿದ್ಯಾನಗರದ ಜಮೀನೊಂದರಲ್ಲಿ ನಡೆದಿದೆ. ಗ್ರಾಮದ ನಿವಾಸಿ ತಿಮ್ಮಪ್ಪ (53) ಮೃತಪಟ್ಟವರು.
‘ಬೋರ್ ಲಾರಿಯ ಆಪರೇಟರ್ ಪೈಪ್ ಬದಲಿಸುವಾಗ ಸರಿಯಾಗಿ ಪೈಪ್ ಜೋಡಣೆ ಮಾಡದೇ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಜೋಡಿಸಿದ್ದರಿಂದ, ಪೈಪ್ ಬೋರ್ ಗಾಡಿಯಿಂದ ಬೇರ್ಪಡೆಯಾಗಿ ಅಲ್ಲೇ ನಿಂತಿದ್ದ ಗಂಡ ತಿಮ್ಮಪ್ಪನ ಮೇಲೆ ಬಿದ್ದಿದೆ’ ಎಂದು ಮೃತರ ಪತ್ನಿ ಮಂಜಮ್ಮ ದೂರು ನೀಡಿದ್ದಾರೆ.
ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ದಾವಣಗೆರೆ: ನಿಟ್ಟುವಳ್ಳಿಯ ಮಣಿಕಂಠ ಸರ್ಕಲ್ ಹತ್ತಿರದ ನಿವಾಸಿ ಪರುಶುರಾಮ (33) ಎಂಬುವವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.