ದಾವಣಗೆರೆ: ಅನ್ಯತ್ಯವಾಗಿ ಸಂಚರಿಸುವವರಿಗೆ ಬೆಳ್ಳಂಬೆಳಿಗ್ಗೆ ಶಾಕ್ ಕಾದಿತ್ತು. ‘ಮನೆಯಿಂದ ಯಾರೂ ಹೊರಗೆ ಬರಬೇಡಿ’ ಎಂದು ವಾರದ ಹಿಂದೆಯಷ್ಟೇ ಕೈಮುಗಿದು ಮನವಿ ಮಾಡಿದ್ದ ಪೊಲೀಸರು ಮಂಗಳವಾರ ‘ದಂಡ’ ಪ್ರಯೋಗ ಮಾಡಿದರು.
ಅಂಬೇಡ್ಕರ್ ವೃತ್ತ ಸೇರಿ ವಿವಿಧ ವೃತ್ತಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 65 ದ್ವಿಚಕ್ರ, 17 ತ್ರಿಚಕ್ರ ಹಾಗೂ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು
ವಾಹನಗಳನ್ನು ಜಪ್ತಿ ಮಾಡಿ ಬಡಾವಣೆ ಠಾಣೆಗೆ ತೆಗೆದುಕೊಂಡು ಐಎಂಎ ಕೇಸ್ ದಾಖಲಿಸಿ ಮತ್ತೆ ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿ ಕಳುಹಿಸಿದರು.
ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ನಿಷೇಧಿಸಿದ್ದರೂ ವಾಹನ ಸಂಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಫೀಲ್ಡಿಗಿಳಿದು ಜನರಿಗೆ ಬಿಸಿ ಮುಟ್ಟಿಸಿದರು.
‘ಪ್ರಮುಖ ವೃತ್ತಗಳಲ್ಲಿ ಸಂಚರಿಸುತ್ತಿದ್ದವರಿಗೆ ಗಾಡಿ ಜಪ್ತಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ’ ಎಂದು ಎಎಸ್ಪಿ ರಾಜೀವ್ ತಿಳಿಸಿದರು.
ನಗರ ಡಿವೈಎಸ್ಪಿ ಯು.ನಾಗೇಶ್ ಐತಾಳ್, ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಣ್ಣ, ಸಿಪಿಐ ಲಕ್ಷ್ಮಣನಾಯ್ಕ, ಬಡಾವಣೆ ಠಾಣೆ ಪಿಎಸ್ಐ ವೀರಭದ್ರಪ್ಪ ಕುಶಲಾಪುರ ಇದ್ದರು.
ಪಾಲಿಕೆ ಸದಸ್ಯರಿಂದ ಪಾಸ್ ದುರ್ಬಳಕೆ
ಪಾಲಿಕೆ ಸದಸ್ಯರೊಬ್ಬರು ವಾಹನದ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಪೊಲೀಸ್ ತಪಾಸಣೆ ವೇಳೆ ಪತ್ತೆಯಾಗಿರುವ ವಿಡಿಯೊ ಹರಿದಾಡಿದೆ.
ಪಾಲಿಕೆಯಿಂದ ಸದಸ್ಯರಿಗೆ ನೀಡಿರುವ ಪಾಸ್ನಲ್ಲಿ ವಾಹನದ ಸಂಖ್ಯೆ ನಮೂದಿಸಿರಲಿಲ್ಲ. ತುರ್ತು ಇರುವವರು ಓಡಾಡುವುದಕ್ಕಾಗಿ ಪೊಲೀಸ್ ಇಲಾಖೆಯಿಂದ ವಾಹನದ ನಂಬರ್ ನಮೂದಿಸಿ ಪಾಸ್ ವಿತರಣೆ ಮಾಡಲಾಗಿದೆ. ಆ ಪಾಸ್ ಪಡೆದುಕೊಂಡಿರುವ ಸದಸ್ಯ ತೋರಿಸಿದಾಗ ಸಿಕ್ಕಿಬಿದ್ದಿದ್ದಾರೆ.
ನಗರದ ಕೆಇಬಿ ವೃತ್ತದಲ್ಲಿ ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದಾಗ ಕ್ಷಮೆಯಾಚಿಸಿದ್ದಾರೆ. ಪಾಸ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.