ದಾವಣಗೆರೆ: ಅನಧಿಕೃತ ಪರವಾನಗಿಯಿಂದಾಗಿ ದಾವಣಗೆರೆ ವಿಭಾಗದಿಂದ ಸರ್ಕಾರಕ್ಕೆ ₹8 ಕೋಟಿ ನಷ್ಟವಾಗಿದ್ದು, ಖಾಸಗಿ ವಾಹನಗಳ ಈ ಕಾರ್ಯಾಚರಣೆಗೆ ಕಡಿವಾಣ ಹಾಕಲು ಸಾರಿಗೆ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕೆಎಸ್ಆರ್ಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಅನಧಿಕೃತ ಪರವಾನಗಿಗೆ ₹1,000- ದಂಡ ಹಾಕಿ ಅದನ್ನು ವಸೂಲಿ ಮಾಡುವುದು ಮುಖ್ಯವಲ್ಲ. ಬದಲಾಗಿ ಇಂತಹ ಪ್ರಕರಣಗಳಿಗೆ ನೋಟಿಸ್ ನೀಡಿ ಪರವಾನಗಿ ಅಮಾನತು ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ನಿಯಮಿತವಾಗಿ ವರದಿ ನೀಡಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಕೆಎಸ್ಆರ್ಟಿಸಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನಿಲುಗಡೆ ಆದೇಶ ಅನುಷ್ಠಾನಗೊಳಿಸಿ: ಕೆಎಸ್ಆರ್ಟಿಸಿ ನಿಯಂತ್ರಣಾ ಧಿಕಾರಿ ಕೆ.ಎಚ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಭಾಗದ ಬಸ್ ನಿಲ್ದಾಣಗಳ ಮುಂಭಾಗದಲ್ಲಿ 500 ಮೀ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳ ನಿಲುಗಡೆ ನಿಷೇಧಿಸಿ ಆದೇಶ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಖಾಸಗಿ ವಾಹನ ಮಾಲೀಕರು ಒಳ ಮಾರ್ಗದ ಸ್ಥಳಗಳಿಗೆ ಪ್ರಾಧಿಕಾರದಲ್ಲಿ ಪರವಾನಗಿ ತೆಗೆದುಕೊಂಡು ಅನಧಿಕೃತವಾಗಿ ರಾಷ್ಟ್ರೀಕೃತ ಮಾರ್ಗದಲ್ಲಿ ವಾಹನ ಓಡಾಟ ನಡೆಸುತ್ತಿದ್ದಾರೆ. ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 186 ವಾಹನಗಳು ಕಾರ್ಯಾ ಚರಣೆ ಮಾಡುತ್ತಿದ್ದು, ನಿಗಮದ ಆದಾ ಯಕ್ಕೆ ಧಕ್ಕೆ ಮತ್ತು ಸರ್ಕಾರಕ್ಕೆ ಸಲ್ಲ ಬೇಕಾದ ತೆರಿಗೆ ವಂಚನೆ ಮಾಡುತ್ತಿ ದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗ, ದಾವಣಗೆರೆ, ಹರಿಹರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಸೇವೆಯೊಂದಿಗೆ ಕ್ರೂಸರ್ಗಳು ಅನಾರೋಗ್ಯಕರ ಸ್ಪರ್ಧೆಗೆ ನಿಂತಿವೆ. ಸಿಸಿ ಪರ್ಮಿಟ್ನ್ನು ಪರೀಕ್ಷಿಸಿ ಕ್ರಮ ಕೈಗೊಳ್ಳು ವಂತೆ ಆರ್ಟಿಒಗೆ ಆಗ್ರಹಿಸಿದರು.
ಪರವಾನಗಿ ಪರಿವೀಕ್ಷಿಸಿ: ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಅನಧಿ ಕೃತ ಕಾರ್ಯಾಚರಣೆ ಮತ್ತು ಪರವಾನಗಿ ಪರಿವೀಕ್ಷಣೆಗೆ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ತಯಾರಿಸಬೇಕು. ಅಲ್ಲದೇ, ವಾರಕ್ಕೊಮ್ಮೆ ಸ್ಕ್ವಾಡ್ನೊಂದಿಗೆ ವಾಹನ ಕಾರ್ಯಾಚರಣೆ ಮತ್ತು ಪರವಾನಗಿ ಪರಿವೀಕ್ಷಣೆ ಮಾಡಬೇಕು ಎಂದು ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ್ ಪ್ರತಿಕ್ರಿಯಿಸಿ, ಸಾರಿಗೆ ಪ್ರಾಧಿಕಾರದಿಂದ ನಿಯಮಾನುಸಾರ ಎಲ್ಲ ಕ್ರಮ ವಹಿಸಲಾಗುತ್ತಿದೆ. ಕೆಎಸ್ಆರ್ಟಿಸಿಯೊಂದಿಗೆ ಸಮನ್ವಯ ದಿಂದ ಕೆಲಸ ಮಾಡಲಾಗುತ್ತಿದೆ. ಆದರೆ, ಸ್ಕ್ವಾಡ್ ಭೇಟಿಗೆ ಸಿಬ್ಬಂದಿ ಕೊರತೆ ಇದೆ ಎಂದರು.
ಕೆಎಸ್ಆರ್ಟಿಸಿ ಮತ್ತು ಆರ್ಟಿಒ ಇಬ್ಬರ ಸಹಯೋಗದಲ್ಲಿ ಪರಿವೀಕ್ಷಣೆ ನಡೆಸಲು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಪಿ.ಬಿ ರಸ್ತೆಯ ಹೈಸ್ಕೂಲ್ ಮೈದಾನ ನಿಲುಗಡೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಡಿವೈಡರ್ ಹಾಕಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಡಿಟಿಒ ಎಸ್.ಎನ್. ಅರುಣ್, ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಸಿದ್ದೇಶ್ವರ್ ಎನ್. ಹೆಬ್ಬಾರ್, ಮುಖ್ಯ ಕಾನೂನು ಅಧಿಕಾರಿ ರಾಜೇಶ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪರಮೇಶ್ವರಪ್ಪ ಇದ್ದರು.
**
843 ವಾಹನಗಳ ಅನಧಿಕೃತ ಓಡಾಟ!
ದಾವಣಗೆರೆಯಿಂದ ಇತರ ಸ್ಥಳಗಳಿಗೆ ಸಾಂದರ್ಭಿಕ ಒಪ್ಪಂದದ ಪರವಾನಗಿ ತೆಗೆದುಕೊಂಡು ಸ್ಟೇಜ್ ಕ್ಯಾರೇಜ್ ಪರವಾನಗಿಯಾಗಿ ಬಳಸಿಕೊಂಡು ಅನಧಿಕೃತವಾಗಿ ಒಟ್ಟು 274 ಬಸ್, 75 ಕ್ರೂಸರ್, 297 ಆಪೆ ಆಟೊಗಳು, ಇತರೆ 198 ಒಟ್ಟು 843 ವಾಹನಗಳು ಓಡಾಡು ತ್ತಿವೆ. ಇದರಿಂದ ಕೆಎಸ್ಆರ್ಟಿಸಿ ಆದಾಯಕ್ಕೆ ಕೊರತೆಯಾಗುತ್ತಿದೆ. ಈ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್ ಆಗ್ರಹಿಸಿದರು.
**
ರಾಜ್ಯದಲ್ಲಿ ಇನ್ನೂ 20,000 ಬಸ್ ಬಿಡುವ ಮತ್ತು 40,000 ಜನರಿಗೆ ಉದ್ಯೋಗ ನೀಡುವ ಉದ್ದೇಶ ಸರ್ಕಾರಕ್ಕಿದೆ.
–ಗೋಪಾಲ್ ಪೂಜಾರಿ, ಅಧ್ಯಕ್ಷ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.