ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದ ಬೀದಿ ದೀಪ ಸರಿಪಡಿಸಿ: ಪ್ರಲ್ಹಾದ ಜೋಶಿ

630 ಮೀಟರ್ ಉದ್ದದ ಮೊದಲ ಹಂತದ ಹಸಿರು ಸಂಚಾರಿ ಪಥ ಲೋಕಾರ್ಪಣೆ
Last Updated 8 ಮೇ 2022, 4:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದ ಚರಂಡಿಗಳ ನೀರು ಶುದ್ಧೀಕರಿಸಿ ನಾಲಾಕ್ಕೆ ಬಿಡುವುದಕ್ಕೆ ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಹಸಿರು ಸಂಚಾರ ಪಥ ನಿರ್ಮಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ರಾಣಿಚನ್ನಮ್ಮ ನಗರ ಸೇತುವೆ ಸಮೀಪ ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 630 ಮೀಟರ್ ಉದ್ದದ ಮೊದಲ ಹಂತದ ಹಸಿರು ಸಂಚಾರಿ ಪಥ ಲೋಕಾರ್ಪಣೆ ಹಾಗೂ ₹96 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ಯೋಜನೆಯಿಂದ ಸೈಕ್ಲಿಂಗ್‌ಗೂ ಅವಕಾಶ ಸಿಗಲಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುದಾನದ ಜೊತೆ ₹ 130 ಕೋಟಿ ವಿದೇಶಿ ನೆರವು ಹಾಗೂ ರಾಜ್ಯ ಸಮಗ್ರ ನಿಧಿಯಡಿ ₹200 ಕೋಟಿ ನೆರವು ಹೆಚ್ಚುವರಿಯಾಗಿ ಅವಳಿ ನಗರದ ಅಭಿವೃದ್ಧಿಗೆ ದೊರೆಯಲಿದೆ’ ಎಂದರು.

‘ರಾಣಿಚನ್ನಮ್ಮ ನಗರದಿಂದ ಬಿಡನಾಳವರೆಗೂ ಚರಂಡಿ ನೀರನ್ನು ಶುದ್ಧೀಕರಿಸಿ ನಾಲಾಕ್ಕೆ ಬಿಡುವ ಯೋಜನೆ ರೂಪಿಸಿಕೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಮೂಲಕ ಇದರ ನಿರ್ವಹಣೆ ನಡೆಯುತ್ತದೆ. ನಗರದಲ್ಲಿ ಬೀದಿ ದೀಪಗಳ ಸಮಸ್ಯೆ ಪರಿಹರಿಸಲು ಎಲ್‌ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸಲು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಕ್ರಮವಹಿಸಬೇಕು’ ಎಂದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಹುಬ್ಬಳ್ಳಿಯ ಈ ನಾಲಾದ ಹತ್ತಿರ ಸಂಚರಿಸಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಇದೀಗ ಹಸಿರು ಸಂಚಾರ ಪಥದ ನಿರ್ಮಾಣದಿಂದ ವಾತಾವರಣ ಬದಲಾಗಿದೆ‌. ಯೋಜನೆಯನ್ನು ಫ್ರಾನ್ಸ್ ನಿಯೋಗದ ಪ್ರತಿನಿಧಿಗಳು ಮೆಚ್ಚಿದ್ದಾರೆ’ ಎಂದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹು–ಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಉಮೇಶ್ ಕೌಜಗೇರಿ, ಸ್ಮಾರ್ಟ್ ಸಿಟಿ ಯೋಜನೆ ಚೇರ್‌ಮನ್ ಡಾ.ಆರ್.ವಿಶಾಲ್, ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೀಜ್ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT