ಧಾರವಾಡ: ತಾಲ್ಲೂಕಿನ ಮಾದನಭಾವಿ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿವರೆಗೂ ಆರೋಪಿಗಳ ಬಂಧನವಾಗಿಲ್ಲ.
ತಮ್ಮ ಮನೆ ಎದುರು ಬೈಕ್ ಚಲಾಯಿಸಿದನೆಂದು ಪರಿಶಿಷ್ಟ ಜಾತಿಯ ಯುವಕನ ಸಮೇತ ಅವರ ತಂದೆ–ತಾಯಿಯನ್ನು ಗ್ರಾಮದ ಕೆಲವರು ಥಳಿಸಿದ್ದರು. ಈ ಸಂಬಂಧ ಆರೋಪಿತರಾದ ರವಿಗೌಡ ಪಾಟೀಲ, ಪಿಲ್ಲು ಮೋಹನಗೌಡ ಪಾಟೀಲ ಸೇರಿದಂತೆ 14 ಜನರ ವಿರುದ್ಧ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕುಟುಂಬಸ್ಥರು ಹೆದರು ಕ್ಯಾರಕೊಪ್ಪ ಗ್ರಾಮದ ಸಂಬಂಧಿಕರ ಮನೆಯಲ್ಲಿಯೇ ಆಶ್ರಯ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಪಟ್ಟಿಹಾಳ, ‘ಈ ಗ್ರಾಮದಲ್ಲಿಯೂ ಹಲ್ಲೆ ಮಾಡಿದ ಆರೋಪಿಗಳ ಸಂಬಂಧಿಕರಿದ್ದು, ಇಲ್ಲಿಗೂ ಬಂದು ತಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆ’ ಎಂದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಧಾರವಾಡ ಭೇಟಿ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯ ಇದ್ದ ಕಾರಣ ಆರೋಪಿಗಳ ಬಂಧನ ಸಾಧ್ಯವಾಗಿಲ್ಲ. ಆದರೆ ಹಲ್ಲೆಗೊಳಗಾದ ರಕ್ಷಣೆಗೆ ಕಾನ್ಸ್ಟೆಬಲ್ ಕಳುಹಿಸಲಾಗಿತ್ತು. ಆದರೆ ಮಾದನಬಾವಿಯ ಅವರ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಿಬ್ಬಂದಿ ಠಾಣೆಗೆ ಮರಳಿದ್ದರು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.