ಗಜೇಂದ್ರಗಡ: ಸಮೀಪದ ಜೀಗೇರಿ ಗ್ರಾಮದ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಕುರಿಗಾಹಿ ಹಾಗೂ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರದಿಂದಲೇ ಪಂಜರು ಇರಿಸಿ ತೀರ್ವ ಶೋಧ ಕಾರ್ಯ ನಡೆಸುತ್ತಿದ್ದರೂ ಸಹ ಚಿರತೆ ಬೋನಿಗೆ ಬೀಳದಿರುವುದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ಜೀಗೇರಿ ಗ್ರಾಮದ ಶರಣಪ್ಪ ಆವಾರಿ ಅವರ ಬಾಳೆ ತೋಟದಲ್ಲಿ ಬೆಳಿಗ್ಗೆ ಅರವಳಿಕೆ ತಜ್ಞರು, ಪಶು ವೈದ್ಯಾಧಿಕಾರಿಗಳು ಹಾಗೂ 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಯ 5 ವಿಶೇಷ ತಂಡಗಳು ಕಾರ್ಯಾಚರಣೆಗೆ ಆರಂಭಿಸಿದ್ದಾರೆ. ಕಾರ್ಯಾಚರಣೆಗೆ ಅನುಕೂಲವಾಗುಂತೆ ಅಲ್ಲಲ್ಲಿ ಬಾಳೆ ತೋಟ ಕಡಿದು ಹಾಕಿ, ಚಿರತೆ ಸೆರೆ ಹಿಡಿಯಲು ತೋಟದಲ್ಲಿ 1 ಪಂಜರು ಇರಿಸಿ ಅದರಲ್ಲಿ ನಾಯಿ ಕಟ್ಟಿದ್ದರು. ಡ್ರೋಣ್ ಮೂಲಕ ಚಿರತೆ ಪತ್ತೆ ಕಾರ್ಯ ನಡೆಸಿದರು.
ಆದರೆ ಅರಣ್ಯ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಜನತೆಗೆ ಎಚ್ಚರಿಕೆಯಿಂದಿರಲು ಸೂಚಿಸುವುದರ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಚಿರತೆ ಬೋನಿಗೆ ಬೀಳದಿರುವುದು ಜೀಗೇರಿ, ಕಾಲಕಾಲೇಶ್ವರ, ಕುಂಟೋಜಿ, ವದೆಗೋಳ, ಭೈರಾಪೂರ ಸೇರಿ ಹತ್ತಕ್ಕೂ ಅಧಿಕ ಗ್ರಾಮಗಳ ಜನರಲ್ಲಿ ಆಂತಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
‘ʼಜಿಗೇರಿ ಗ್ರಾಮದ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಹಿಡಿಯಲು ಇಲಾಖೆ ಸಿಬ್ಬಂದಿಗಳೊಂದಿಗೆ ಬುಧವಾರ ಹಾಗೂ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕಂಡು ಬಂದಿಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಮತ್ತೆ ಅದೇ ಜಾಗದಲ್ಲಿ ಚಿರತೆ ಕಾಣಿಸದಿದ್ದರೆ ಅದು ದೂರ ಹೋಗಿರುವ ಸಾದ್ಯತೆ ಇರುತ್ತದೆ. ಅಲ್ಲದೆ ಇಂದು ನಾಗೇಂದ್ರಗಡದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ ಜಿಗೇರಿ ಹಾಗೂ ನಾಗೇಂದ್ರಗಡ ಗ್ರಾಮಗಳಲ್ಲಿ ತಲಾ ಒಂದು ಪಂಜರು ಇರಿಸಲಾಗಿದೆʼ ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾಹಿತಿ ನೀಡಿದರು.
ಚಿರತೆ ಸೆರೆ ಹಿಡಿಯಲು ಇಟ್ಟಿರುವ ಬೋನಿನಲ್ಲಿ ನಾಯಿ ಕಟ್ಟಿರುವುದು
ಚಿರತೆಯೊಂದಿಗೆ ಮರಿಗಳಿವೆ ಎಂಬ ಗ್ರಾಮಸ್ಥರ ಊಹೆ ನಿಜವೂ ಆಗಿರಬಹುದು. ಮರಿಗಳಿದ್ದಾಗ ಚಿರತೆ ಬೋನಿಗೆ ಬೀಳುವುದು ವಿರಳ. ಹೀಗಾಗಿ ಆ ನಿಟ್ಟಿನಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದೇವೆ