ಹಾಸನ: ತಾಲ್ಲೂಕಿನ ಜೋಡಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ, ನಾಲ್ಕು ಮೇಕೆಗಳನ್ನು ಕೊಂದಿದೆ.
ಸೋಮವಾರ ರಾತ್ರಿ ಗ್ರಾಮದೊಳಗೆ ನುಗ್ಗಿದ ಚಿರತೆ, ರಂಗೇಗೌಡ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ಮೇಕೆಗಳನ್ನು ಕೊಂದಿದೆ. ನಂತರ ಅದೇ ಗ್ರಾಮದ ವೆಂಕಟೇಗೌಡ ಎಂಬುವವರ ಕೊಟ್ಟಿಗೆಗೆ ದಾಳಿ ಮಾಡಿ ಮೇಕೆಯನ್ನು ಚಿರತೆ ಹೊತ್ತೋಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ .
ಗ್ರಾಮದಲ್ಲಿ ಚಿರತೆ ಹಾವಳಿಯಿಂದ ಜನರು ಆತಂಕಕ್ಕೀಡಾಗಿದ್ದು, 15 ದಿನಗಳ ಹಿಂದೆ ಎರಡು ನಾಯಿಗಳನ್ನು ಚಿರತೆ ಹೊತ್ತೋಯ್ದಿತ್ತು. ಹಗಲು ವೇಳೆ ರೈತರ ಜಮೀನಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.