ಹೊಳೆನರಸೀಪುರ: ‘ದೇಶವನ್ನು ಭದ್ರ ಬುನಾದಿಯೊಂದಿಗೆ ನಿಲ್ಲಿಸುವ ಶಕ್ತಿ ಇರುವಂತಹ ವ್ಯಕ್ತಿ ಮೋದಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ತಾಲ್ಲೂಕಿನ ಬಾಗಿವಾಳು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘85 ಕೋಟಿ ಜನತೆಗೆ ಅಕ್ಕಿ ಕೊಡುವ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದು, ಯಾವುದೇ ಪ್ರಚಾರಕ್ಕೆ ಬೆಲೆ ಕೊಡದೇ, ಏ. 26ರಂದು ನಡೆಯುವ ಚುನಾವಣೆಯಲ್ಲಿ ತಾಯಂದಿರು, ಹಿರಿಯರು, ಯುವಕರು, ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡುವಂತೆ’ ಮನವಿ ಮಾಡಿದರು.
‘ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇದ್ದಾರಲ್ಲಾ, ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಐದು ರಾಜ್ಯಗಳಿಗೆ, ಬೆಂಗಳೂರಿನಲ್ಲಿ ಹಣ ವಸೂಲಿ ಮಾಡುತ್ತಾರೆ. ಇಡೀ ಬೆಂಗಳೂರು ಅವರ ಕೈಯಲ್ಲಿದೆ. ಬಿಡಿಎ, ಕಾರ್ಪೊರೇಷನ್ ಹಾಗೂ ಇತರೆ ಇದೆ. ಬೇರೆ ವಿಷಯ ಚರ್ಚೆ ಬೇಡ’ ಎಂದರು.
‘ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಾವು ಮಾಡಬಾರದ ಸಾಧನೆ ಮಾಡಿದ್ದೇವೆ ಎಂದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಜಾಹೀರಾತಿಗೆ ಹಣ ಪೋಲು ಮಾಡುವ ರಾಜ್ಯ ಸರ್ಕಾರದ ಯೋಜನೆಗಳು ಶಾಶ್ವತವಲ್ಲ’ ಎಂದರು.
‘ಬಾಗಿವಾಳು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಇಂದು ಶ್ರೇಷ್ಠವಾದ ದಿನದಲ್ಲಿ ಬಂದಿದ್ದೇನೆ. ಬಾಗಿವಾಳು ಗ್ರಾಮದ ನಂಜುಂಡಪ್ಪನವರು, ಅವರ ಮಗ ನನ್ನ ಅತ್ಮೀಯರು’ ಎಂದರು.
ನಂತರ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಯುಗಾದಿ ಹಬ್ಬದ ದಿನ ಕರಗ ಹೊತ್ತ ವೇದಮೂರ್ತಿ ಕರಿಬಸವಯ್ಯನವರ ಮನೆಗೆ ತೆರಳಿ ಮಾತನಾಡಿಸಿದರು.
ಜೆಡಿಎಸ್ ಮುಖಂಡ ದಿ. ನಂಜುಂಡಪ್ಪನವರ ಮನೆಗೆ ತೆರಳಿ, ಅವರ ಪುತ್ರ ಬಸವರಾಜು ಜೊತೆ ಚರ್ಚಿಸಿ, ಮಧ್ಯಾಹ್ನದ ಭೋಜನ ಮಾಡಿದರು. ನಂತರ ಹರದನಹಳ್ಳಿಗೆ ತೆರಳಿದರು.