ಹಾಸನ: ಪೆನ್ ಡ್ರೈವ್ ಹಂಚಿಕೆಯ ಆರೋಪ ಹೊತ್ತಿರುವ ನವೀನ್ ಗೌಡ, ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ‘ಅರಕಲಗೂಡು ಶಾಸಕ ಎ.ಮಂಜು ಅವರೇ ಪೆನ್ಡ್ರೈವ್ ಹಂಚಿಕೆ ಮಾಡಿರಬಹುದು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ’ ಎಂದು ಆರೋಪಿಸಿದ್ದಾನೆ.
‘ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕ ಪೆನ್ ಡ್ರೈವ್ ಅನ್ನು ಎ.ಮಂಜು ಅವರಿಗೆ ಏಪ್ರಿಲ್ 21 ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು’ ಎಂದು ಪೋಸ್ಟ್ ಮಾಡಿದ್ದಾನೆ.
ಪೆನ್ಡ್ರೈವ್ ಹಂಚಿಕೆ ಸಂಬಂಧ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನವೀನ್ಗೌಡ ಆರೋಪಿಯಾಗಿದ್ದು, ಸದ್ಯಕ್ಕೆ ತಲೆಮರೆಸಿಕೊಂಡಿದ್ದಾನೆ